ನವದೆಹಲಿ: 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ವಾಂಗ್ಚೂಕ್ ಅವರು 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿದ್ದರೂ, ಹೋರಾಟದ ಸಂಕಲ್ಪ ಮಾತ್ರ ಕುಗ್ಗಿಲ್ಲ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಏನೇ ಪರಿಸ್ಥಿತಿ ಎದುರಾದರೂ ಜುಲೈ 20ರವರೆಗೆ ಬದುಕಿರುತ್ತೇನೆ' ಎಂದು ಹೇಳಿದ್ದಾರೆ.
ಮುಂದುವರಿದು, 'ನಾನು ಹೊರಗಿನಿಂದ ಬಲಹೀನನಾಗಿ ಕಾಣಿಸಬಹುದು, ಆದರೆ ಒಳಗಿನಿಂದ ತುಂಬಾ ಗಟ್ಟಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಇಷ್ಟೇ ಶಕ್ತಿ ಇದೆ ಎಂದು ನಾನು ನಂಬುತ್ತೇನೆ. ಜುಲೈ 20 ರಂದು ನಾವು ಸಂಸತ್ತಿನವರೆಗೆ ಶಾಂತಿಯುತ ಮೆರವಣಿಗೆ ನಡೆಸಲಿದ್ದೇವೆ. ನಾವೆಲ್ಲರೂ ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ಬೇಡಿಕೆಯನ್ನು ಇಡಲಿದ್ದೇವೆ. ಅದಕ್ಕೆ ಈ ಶಕ್ತಿ ನಮಗೆ ಬೇಕು' ಎಂದಿದ್ದಾರೆ.
ಮುಂದುವರಿದು 'ಹೇಗಾದರೂ ಮಾಡಿ ನಾನು ಜುಲೈ 20ರ ತನಕ ಬದುಕಿರುತ್ತೇನೆ. ಒಂದು ವೇಳೆ ನೀವೆಲ್ಲ ಬಾರದೇ ಆ ದಿನದ ಮೆರವಣಿಗೆ ಯಶಸ್ವಿ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಮರಳಿ ಬರುತ್ತೇನೆ' ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ಅಂಗಾಂಗ ವೈಫಲ್ಯದ ಆತಂಕ
ಸೊನಮ್ ಅವರ ತೂಕ ಒಟ್ಟು 9 ಕೆ.ಜಿ ಇಳಿದಿದೆ. ಅವರ ಆರೋಗ್ಯವು ಗಂಭೀರ ಸ್ಥಿತಿಯತ್ತ ತಲುಪುತ್ತಿದೆ. ಅವರು ಹೀಗೆಯೇ ಉಪವಾಸ ಮುಂದುವರಿಸಿದರೆ, ಅವರ ಅಂಗಾಂಗಗಳಿಗೆ ಹಾನಿಯಾಗಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ನಡುವೆ, ಮಧ್ಯಪ್ರವೇಶಿಸಿದ ದೆಹಲಿ ಹೈಕೋರ್ಟ್, 'ಪ್ರತಿಯೊಬ್ಬ ನಾಗರಿಕನ ಜೀವವೂ ಅಮೂಲ್ಯವಾದುದು. ಆದ್ದರಿಂದ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೊನಮ್ ವಾಂಗ್ಚೂಕ್ ಅವರ ವೈದ್ಯಕೀಯ ತಪಾಸಣೆಯನ್ನು ನಿತ್ಯವೂ ನಡೆಸಬೇಕು' ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ.
ಇತರ ವಿದ್ಯಾರ್ಥಿಗಳ ಆರೋಗ್ಯವೂ ಕ್ಷೀಣ
ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ 28ನೇ ದಿನಕ್ಕೆ ಕಾಲಿಟ್ಟಿದೆ. ಪ್ರತ್ಯೇಕ ವೇದಿಕೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಎಐಎಸ್ಎ ಸಂಘಟನೆಯ ವಿದ್ಯಾರ್ಥಿಗಳಾದ ನೇಹಾ, ಮನೀಶ್ ಮತ್ತು ಆಮಿನ್ ಅವರ ಆರೋಗ್ಯವೂ ಕ್ಷೀಣಿಸಿದೆ. ನಿರ್ಜಲೀಕರಣದಿಂದಾಗಿ ಆಮಿನ್ ಅವರ ಆರೋಗ್ಯ ಹದಗೆಟ್ಟಿದ್ದರೆ, ನೇಹಾ ಅವರರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ (49 mg/ಜಐ) ಕುಸಿದಿದೆ ಮತ್ತು ಮನೀಶ್ ದೇಹದ ತೂಕ ಶೇ 10 ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರ ಬೇಡಿಕೆಗಳೇನು?
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು.
ಪರೀಕ್ಷಾ ಅಕ್ರಮಗಳಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂಬುವುದಾಗಿದೆ.

