ನವದೆಹಲಿ: ತ್ರಿಭಾಷಾ ನೀತಿಯನ್ನು 9ನೇ ತರಗತಿಯಿಂದ ಕಡ್ಡಾಯಗೊಳಿಸಿದರೆ ಅದು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ.
ಪ್ರತಿ ಜಿಲ್ಲೆಯಲ್ಲೂ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು, 'ಮೂರನೇ ಭಾಷೆಯ ಕಲಿಕೆಯು 6ನೇ ತರಗತಿಯಿಂದಲೇ ಆರಂಭವಾಗಬೇಕು ಮತ್ತು 9ನೇ ತರಗತಿಯ ವೇಳೆಗೆ ಕೊನೆಗೊಳ್ಳಬೇಕು' ಎಂದು ಹೇಳಿದೆ.
'ದಯವಿಟ್ಟು... 9ನೇ ತರಗತಿಯಲ್ಲಿ ಹೊಸ ಭಾಷೆಯನ್ನು ಪರಿಚಯಿಸಬೇಡಿ. ಮೂರನೇ ಭಾಷೆಯ ಕಲಿಕೆಯನ್ನು ನೀವು(ಸಿಬಿಎಸ್ಇ) 5ನೇ ಅಥವಾ 6ನೇ ತರಗತಿಯಿಂದ ಪ್ರಾರಂಭಿಸಿ. 9ನೇ ತರಗತಿಯ ವೇಳೆಗೆ ಈ ಮೂರನೇ ಭಾಷೆಯ ಕಲಿಕೆ ನಿಲ್ಲಬೇಕು. ವಿದ್ಯಾರ್ಥಿಗಳು ಅನುಭವಿಸುತ್ತಿರುವ ಒತ್ತಡವನ್ನು ಗಮನಿಸಿ. ನಿಮ್ಮ ಸರ್ಕಾರಕ್ಕೆ ಸಲಹೆ ನೀಡಿ. ನನ್ನಲ್ಲಿರುವ ವಿದ್ಯಾರ್ಥಿ ಇನ್ನೂ ಜೀವಂತವಾಗಿದ್ದಾನೆ' ಎಂದು ಪೀಠ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲರೊಬ್ಬರು, ಸಿಬಿಎಸ್ಇ ಶಾಲೆಗಳಲ್ಲಿ 9ನೇ ತರಗತಿಯಿಂದ ಮಾತ್ರ ಮೂರನೇ ಭಾಷೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
'ಆ ಹಂತದಲ್ಲಿ ಹೊಸ ಭಾಷೆಯೊಂದನ್ನು ಕಲಿಯಲು ಪ್ರಾರಂಭಿಸುವುದು ವಿದ್ಯಾರ್ಥಿಗಳಿಗೆ ಒತ್ತಡವನ್ನು ಉಂಟುಮಾಡಬಹುದು' ಎಂದು ನ್ಯಾ. ಬಿ.ವಿ. ನಾಗರತ್ನ ಹೇಳಿದರು.
ಅದರ ಬದಲಿಗೆ, ಮಾಧ್ಯಮಿಕ ಶಾಲಾ ಹಂತದಲ್ಲಿಯೇ ಮೂರನೇ ಭಾಷೆಯನ್ನು ಪರಿಚಯಿಸಬೇಕು ಎಂದು ಅವರು ಪ್ರತಿಪಾದಿಸಿದರು.

