ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪೂರ್ಣಾವಧಿ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್ ಅರ್ಹವಾಗಿದ್ದು, ಅದಕ್ಕೆ ಭಾರತ ಬೆಂಬಲವನ್ನು ಘೋಷಿಸಿದೆ.
ಇದರೊಂದಿಗೆ, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ದೀರ್ಘಕಾಲದ ಸಂಘರ್ಷಕ್ಕೆ ಅಂತ್ಯ ಹಾಡಲು 'ದ್ವಿ-ರಾಷ್ಟ್ರ' ಸೂತ್ರವೇ ಸೂಕ್ತ ಪರಿಹಾರ ಎಂಬ ತನ್ನ ನಿಲುವನ್ನು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ.
ಬ್ರಸೆಲ್ಸ್ನಲ್ಲಿ ಸೋಮವಾರ ನಡೆದ ಪ್ಯಾಲೆಸ್ಟೀನ್ ಡೊನರ್ ಗ್ರೂಪ್ನ ಸಚಿವರ ಮಟ್ಟದ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀಪ್ರಿಯಾ ರಂಗನಾಥನ್ ಅವರು ಭಾರತದ ಈ ರಾಜತಾಂತ್ರಿಕ ನಿಲುವನ್ನು ಸ್ಪಷ್ಟಪಡಿಸಿದರು.
ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಎರಡೂ ರಾಷ್ಟ್ರಗಳು ಪರಸ್ಪರ ಮಾನ್ಯತೆ ಪಡೆದ ಗಡಿಗಳೊಂದಿಗೆ ಶಾಂತಿ ಮತ್ತು ಭದ್ರತೆಯಿಂದ ಒಟ್ಟಿಗೆ ಬಾಳಬೇಕು ಎಂಬ 'ದ್ವಿ-ರಾಷ್ಟ್ರ ಸೂತ್ರ'ದ ದೃಷ್ಟಿಕೋನವನ್ನು ಭಾರತ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.
ಭಾರತವು ಪ್ಯಾಲೆಸ್ಟೀನ್ ಜನರ ದೀರ್ಘಕಾಲದ ವಿಶ್ವಾಸಾರ್ಹ ಪಾಲುದಾರನಾಗಿದೆ. ದ್ವಿ-ರಾಷ್ಟ್ರ ಸೂತ್ರಕ್ಕೆ ನಮ್ಮ ಬೆಂಬಲ ಮುಂದುವರಿಯಲಿದ್ದು, ಪ್ಯಾಲೆಸ್ಟೀನ್ಗೆ ವಿಶ್ವಸಂಸ್ಥೆಯ ಸದಸ್ಯತ್ವ ಸಿಗಬೇಕು ಎಂಬ ನಿಲುವಿಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ಯಾಲೆಸ್ಟೀನ್ ಜನರಿಗೆ ಭಾರತ ನೀಡುತ್ತಿರುವ ನಿರಂತರ ಮಾನವೀಯ
ನೆರವು ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಭಾರತದ ನೆರವುಗಳು ಪ್ಯಾಲೆಸ್ಟೀನ್ನ ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿದ್ದು, ಮುಖ್ಯವಾಗಿ ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯ ಮೇಲೆ ಕೇಂದ್ರೀಕೃತವಾಗಿವೆ ಎಂದು ಅವರು ತಿಳಿಸಿದರು.
ಪ್ಯಾಲೆಸ್ಟೀನ್ನಲ್ಲಿ ಆರೋಗ್ಯ ಸೇವೆ, ಮಹಿಳಾ ಸಬಲೀಕರಣ ಮತ್ತು ಸಾಂಸ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿದೆ. ಇದರ ಜೊತೆಗೆ, ಪುನರ್ವಸತಿ, ಆರೋಗ್ಯ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಗೆ ಸಂಬಂಧಿಸಿದ ಹಲವು ಹೊಸ ಯೋಜನೆಗಳನ್ನು ಭಾರತ ಸದ್ಯದಲ್ಲೇ ಕೈಗೆತ್ತಿಕೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

