ಗುರುವಾರ ಬೆಳಿಗ್ಗೆ ಪ್ರಧಾನಿ ಮೋದಿ ಎಕ್ಸ್ನಲ್ಲಿ, 'ನಮ್ಮ ಯುವಕರ ಭವಿಷ್ಯಕ್ಕಿಂತ ಮುಖ್ಯವಾದುದು ಬೇರೆ ಯಾವುದೂ ಇಲ್ಲ. ಯುವಕರ ಭವಿಷ್ಯಕ್ಕೆ ಹಾನಿ ಉಂಟುಮಾಡಿದವರನ್ನು ಬಿಡುವುದಿಲ್ಲ' ಎಂದು ಪೋಸ್ಟ್ ಮಾಡಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದೂ ಅವರು ಘೋಷಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ, ಹೊಣೆಗಾರಿಕೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದಲೇ ಪ್ರಾರಂಭವಾಗಬೇಕು. ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
"ಪ್ರಧಾನಿಯವರ ಘೋಷಣೆಯು ಪದೇ ಪದೇ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿನ ನಿಜವಾದ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿದೆ. ಪ್ರಧಾನಿಯವರು ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕ್ರೂರ ಆಟವಾಡುತ್ತಿದ್ದಾರೆ" ಎಂದು ಸಿಜೆಪಿ ವಕ್ತಾರ ಅಶುತೋಷ್ ರಂಕಾ ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ತ್ವರಿತ ನ್ಯಾಯಾಲಯಗಳ ಕೊರತೆಯಿರುವುದಕ್ಕೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿಲ್ಲ. ಬದಲಿಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಂಪೂರ್ಣ ಅಸಮರ್ಥತೆಯಿಂದ ಇದು ನಡೆಯುತ್ತಿದೆ ಎಂದು ಹೇಳಿದ ರಂಕಾ, ಸುರಕ್ಷಿತ ಮತ್ತು ವ್ಯವಸ್ಥಿತ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಶಿಕ್ಷಣ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂದು ಈ ದೇಶದ ಯುವಜನತೆ ಕೇಳುತ್ತಿರುವ ವಿಷಯ ಒಂದೇ ಆಗಿದೆ. ಅದುವೇ ಹೊಣೆಗಾರಿಕೆ ಎಂದು ಸ್ಪಷ್ಟಪಡಿಸಿದ್ದಾರೆ.
"ವಿದ್ಯಾರ್ಥಿಗಳಿಗೆ ದೀರ್ಘ ಕಾನೂನು ಪ್ರಕ್ರಿಯೆಗಳ ಭರವಸೆಗಳ ಅಗತ್ಯವಿಲ್ಲ. ಬದಲಿಗೆ ಅವರಿಗೆ ತಕ್ಷಣದ ನ್ಯಾಯ ಮತ್ತು ಹೊಣೆಗಾರಿಕೆ ಸಿಗಬೇಕು. ಆ ಹೊಣೆಗಾರಿಕೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧದ ಕಠಿಣ ಕ್ರಮದೊಂದಿಗೆ ಪ್ರಾರಂಭವಾಗಬೇಕು" ಎಂದು ರಂಕಾ ಹೇಳಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಪ್ರಧಾನಿಯವರ 'ನಮ್ಮ ಯುವಕರ ಭವಿಷ್ಯಕ್ಕಿಂತ ಮುಖ್ಯವಾದುದು ಬೇರೆ ಯಾವುದೂ ಇಲ್ಲ' ಎಂಬ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. 'ಯಾವುದೂ ಇಲ್ಲ' ಎಂಬ ಪದಗಳ ಬದಲಿಗೆ 'ಧರ್ಮೇಂದ್ರ ಪ್ರಧಾನ್' ಎಂಬ ಹೆಸರನ್ನು ಬಳಸಿ ಅವರು ಪೋಸ್ಟ್ ಮಾಡಿದ್ದಾರೆ.

