ಕಾಸರಗೋಡು: ಕಳೆದ ಐದು ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇವೆಯಲ್ಲಿ ನಿರತವಾಗಿರುವ ಕಾಸರಗೋಡಿನಎಸ್.ವಿ.ಟಿ. ರಸ್ತೆಯ ಶ್ರೀ ಪುರಂದರದಾಸ ಸಂಗೀತ ಕಲಾಮಂದಿರದ ಸುವರ್ಣ ಮಹೋತ್ಸವ ಸಮಾರಂಭ ಆಗಸ್ಟ್ 28ರಿಂದ 30ರ ವರೆಗೆ ಸಂಗೀತೋತ್ಸವದೊಂದಿಗೆ ಆಚರಿಸಲಾಗುವುದು ಎಂದು ಕಲಾಮಂದಿರದ ಸಂಸ್ಥಾಪಕ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1976ರ ಜುಲೈಯಲ್ಲಿ ಕಾಸರಗೋಡಿನ ಶ್ರೀ ವಿಶ್ವಕರ್ಮ ಭಜನಾ ಸಂಘದ ಸಹಕಾರದೊಂದಿಗೆ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಅವರು ಸ್ಥಾಪಿಸಿದ ಈ ಕಲಾಮಂದಿರವು ಗುರು-ಶಿಷ್ಯ ಪರಂಪರೆಯಲ್ಲಿ ಕೇರಳ ಮತ್ತು ಕರ್ನಾಟಕದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ಪುರಂದರದಾಸ-ತ್ಯಾಗರಾಜ-ಮುತ್ತಯ್ಯ ಭಾಗವತರ್ ಆರಾಧನಾ ಮಹೋತ್ಸವವನ್ನು ನಡೆಸುತ್ತಾ ಬಂದಿದ್ದು, ಪ್ರತಿವರ್ಷ ಐವತ್ತಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಆಗಸ್ಟ್ 28ರ ಶುಕ್ರವಾರ ಮಧ್ಯಾಹ್ನ 3ಕ್ಕೆ ಕಾಸರಗೋಡಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಉದ್ಘಾಟನೆಯೊಂದಿಗೆ ಮಹೋತ್ಸವ ಆರಂಭವಾಗಲಿದೆ. ಬಳಿಕ ಕಲಾಮಂದಿರದ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯುವುದು. ಸಂಜೆ 5.30ಕ್ಕೆ ಆತ್ರೇಯಿ ಕೃಷ್ಣ ಮತ್ತು ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ.
ಆಗಸ್ಟ್ 29 ಮತ್ತು 30ರಂದು ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಮಠದಲ್ಲಿ, ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಆಶ್ರಯದಲ್ಲಿ, ಪವಿತ್ರ ಚಾತುರ್ಮಾಸ್ಯದ ಸನ್ನಿಧಿಯಲ್ಲಿ ಮಹೋತ್ಸವ ಮುಂದುವರಿಯಲಿದೆ.
ಎರಡೂ ದಿನ ಬೆಳಿಗ್ಗೆ 10 ಗಂಟೆಯಿಂದ ಕೇರಳ ಮತ್ತು ಕರ್ನಾಟಕದ ಹದಿನೈದಕ್ಕೂ ಹೆಚ್ಚು ಆಮಂತ್ರಿತ ಕಲಾವಿದರ ಕಛೇರಿಗಳು ಹಾಗೂ ವಿದ್ಯಾರ್ಥಿ ತಂಡಗಳ ಗಾಯನ ನಡೆಯಲಿದೆ. ಆಗಸ್ಟ್ 29ರಂದು ಸಂಜೆ 5ಕ್ಕೆ ಚೆನ್ನೈನ ಖ್ಯಾತ ಗಾಯಕ ಅಜಯ್ ನಂಬೂದಿರಿ ಅವರಿಂದ ಮುಖ್ಯ ಸಂಗೀತ ಕಛೇರಿ ಜರುಗಲಿದೆ.
ಆಗಸ್ಟ್ 30ರ ಬೆಳಿಗ್ಗೆ 11ಕ್ಕೆ ಖ್ಯಾತ ಪಿಟೀಲು ವಿದ್ವಾನ್ ವಿಠಲ್ ರಾಮಮೂರ್ತಿ ಮತ್ತು ತಂಡದವರ ಕಛೇರಿ ನಡೆಯಲಿದೆ.
ಅಂದು ಮಧ್ಯಾಹ್ನ 3ಕ್ಕೆ ಶ್ರೀಮದೆಡನೀರು ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಲಾಮಂದಿರದ ಸಂಸ್ಥಾಪಕ ಗುರು ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಅವರು ರಚಿಸಿದ ಕೃತಿಗಳ ಬಿಡುಗಡೆ, ಐದು ದಶಕಗಳಲ್ಲಿ ಕಲಾಮಂದಿರದಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಗುರುವಂದನೆ ಹಾಗೂ ವಿದ್ವಾನ್ ವಿಠಲ್ ರಾಮಮೂರ್ತಿ ಅವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಬಳಿಕ ಖ್ಯಾತ ಮಲ್ಲಾಡಿ ತಂಡದವರ ಭವ್ಯ ಸಂಗೀತ ಕಛೇರಿಯೊಂದಿಗೆ
ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಪೂರ್ಣಪ್ರಜ್ಞ, ಸಹಸಂಚಾಲಕ ಪ್ರದೀಶ್, ಸದಸ್ಯರಾದ ಪುಷ್ಪಲತಾ ಹಾಗೂ ಭಾರತೀ ಉಪಸ್ಥೀತರಿದ್ದರು.

