ನವದೆಹಲಿ: 'ದೇಶವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಹಾಗೂ ಯುವಕರಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಲು ಎಲ್ಲರೂ ಕೈಜೋಡಿಸಬೇಕು' ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 'ನಶೆ ಮುಕ್ತ ಭಾರತ ಅಭಿಯಾನ' ಈಗಾಗಲೇ ಆರಂಭಗೊಂಡಿದೆ.
ಈ ಅಭಿಯಾನವು ದೇಶದಾದ್ಯಂತ ತಲುಪಬೇಕು. ಯುವಕರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಬೇಕು. ದೇಶದ ಪ್ರಗತಿಗೆ ಯುವಜನರ ಪಾತ್ರ ಮುಖ್ಯ' ಎಂದಿದ್ದಾರೆ.
2020ರ ಆಗಸ್ಟ್ 15 ರಂದು ಈ ಅಭಿಯಾನವನ್ನು ಆರಂಭಿಸಲಾಯಿತು. ಮಾದಕ ವ್ಯಸನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಯುವಕರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ' ಎಂದು ಹೇಳಿದ್ದಾರೆ.
ಸ್ವನಿಧಿ ಸಾಲ ಸೌಲಭ್ಯದ ಬಗ್ಗೆ ಉಲ್ಲೇಖಿಸಿದ ಅವರು, 'ಲಕ್ಷಾಂತರ ಮಹಿಳಾ ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆಯು ಸಹಕಾರಿಯಾಗಿದೆ. ಈ ಯೋಜನೆಯಡಿ ₹ 10 ಸಾವಿರ ಸಾಲ ಸಿಗುತ್ತಿದ್ದು, ಶೇ. 46 ರಷ್ಟು ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪರಿಚಯಿಸಲಾದ ಈ ಯೋಜನೆಯನ್ನು 2030ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ' ಎಂದು ತಿಳಿಸಿದ್ದಾರೆ.

