ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನಲ್ಲಿ 'ಒಂದು ಜಗತ್ತು - ಒಂದು ಮಾನವಕುಲ' (One World - One Humanity) ಎಂಬ ಆಶಯದ ಕುರಿತು ಮಹತ್ವದ ಅಂತರರಾಷ್ಟ್ರೀಯ ಸಮ್ಮೇಳನ ಶನಿವಾರ ನಡೆಯಿತು.
14 ವಿವಿಧ ಧರ್ಮಗಳನ್ನು ಪ್ರತಿನಿಧಿಸಿದ ಧಾರ್ಮಿಕ ನಾಯಕರು ಸಮ್ಮೇಳನದಲ್ಲಿ ಭಾಗವಹಿಸಿ, ವಿಶ್ವಶಾಂತಿ, ಮಾನವೀಯತೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಕುರಿತು ತಮ್ಮ ಸಂದೇಶಗಳನ್ನು ಹಂಚಿಕೊಂಡರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಪಾಲ್ಗೊಂಡರು.
ಧರ್ಮ, ದೇಶ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ನಂಬಿಕೆಗಳ ವೈವಿಧ್ಯತೆಯನ್ನು ಪರಸ್ಪರ ಗೌರವಿಸುವುದರ ಜೊತೆಗೆ, ಇಡೀ ಮಾನವಕುಲ ಒಂದೇ ಎಂಬ ಅರಿವು ಮತ್ತು ಭಾವನೆಯನ್ನು ಬೆಳೆಸುವ ಅಗತ್ಯವನ್ನು ಧಾರ್ಮಿಕ ನಾಯಕರು ಪ್ರತಿಪಾದಿಸಿದರು.
ಮಾನವ ಸಮಾಜವು ವಿಭಜನೆಯ ಮನಸ್ಥಿತಿಯನ್ನು ಮೀರಿ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು. ಧರ್ಮಗಳು ಮಾನವೀಯತೆಯನ್ನು ಬೆಸೆಯುವ ಸೇತುವೆಗಳಾಗಬೇಕು ಎಂಬ ಆಶಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.
ವಿವಿಧ ಧರ್ಮಗಳ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ 'ಒಂದು ಜಗತ್ತು - ಒಂದು ಮಾನವಕುಲ' ಎಂಬ ಸಂದೇಶವನ್ನು ಸಾರಿರುವುದು ಜಾಗತಿಕ ಸಾಮರಸ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.

