ನವದೆಹಲಿ: ರಾಜಧಾನಿಯಲ್ಲಿ ಹೆದ್ದಾರಿಗಳ ನಿರ್ಮಾಣಕ್ಕಾಗಿ ಮರಗಳ ಕಡಿತ, ಅಕ್ರಮ ಮರಳುಗಾರಿಕೆ ಹಾಗೂ ವಾಯುಮಾಲಿನ್ಯದಂತಹ ಮಹತ್ವದ ಪಾರಿಸಾರಿಕ ಕಳವಳಗಳನ್ನು ಬಗೆಹರಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಪರಿಸ್ಥಿತಿ ಕೈಮೀರುವ ಮುನ್ನವೇ ಅದಕ್ಕಿರುವ ಅಧಿಕಾರವನ್ನು ಬಳಸಿಕೊಳ್ಳಬೇಕೆಂದು ಸಂಸದೀಯ ಸಮಿತಿಯೊಂದು ಹಸಿರು ನ್ಯಾಯಾಧೀಕರಣವನ್ನು ಆಗ್ರಹಿಸಿದೆ.
ನಿಯಮವಿತವಾದ ಕಾರ್ಯಾನುಷ್ಟಾನ ವರದಿಗಳು, ಜಂಟಿ ಸಮಿತಿಗಳ ಪರಿಣಾಮಕಾರಿ ಬಳಕೆ, ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿಗದಿಪಡಿಸುವುದು ಹಾಗೂ ಎನ್ಜಿಟಿ ಆದೇಶಗಳನ್ನು ಸರಿಯಾಗಿ ಜಾರಿಗೊಳಿಸಲು ಉತ್ತಮ ಮಾರ್ಗೋಪಾಯಗಳನ್ನು ರೂಪಿಸುವಂತೆಯೂ ಸಮಿತಿಯು ನ್ಯಾಯಾಧೀಕರಣಕ್ಕೆ ಶಿಫಾರಸು ಮಾಡಿದೆ.
ಈ ತಿಂಗಳ ಆರಂಭದಲ್ಲಿ ಸಂಸತ್ನ ಉಭಯ ಸದನಗಳಲ್ಲಿ ಮಂಡಿಸಲಾದ' ದೇಶದಲ್ಲಿ ನ್ಯಾಯಾಧೀಕರಣ ವ್ಯವಸ್ಥೆಯ ಕಾರ್ಯನಿರ್ವಹಣೆಯ ವಿಮರ್ಶೆ' ಕುರಿತ ವರದಿಯನ್ನು ಕಾನೂನು ಹಾಗೂ ಸಿಬ್ಬಂದಿ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ಮಂಡಿಸಿದೆ.
ದಿಲ್ಲಿಯನ್ನು ತೀವ್ರವಾಗಿ ಬಾಧಿಸುತ್ತಿರುವ ವಾಯುಮಾಲಿನ್ಯ, ನದಿ ಮಾಲಿನ್ಯ, ಹೆದ್ದಾರಿಯಲ್ಲಿ ಮರಗಳ ಕಡಿತ ಹಾಗೂ ರಸ್ತೆಯ ಪಕ್ಕದಲ್ಲಿ ಸ್ವದೇಶಿ ಗಿಡ, ಮರಗಳು ನಾಶವಾಗಿರುವುದು, ಮಹಾನಗರಗಳಲ್ಲಿ ಗಗನಚುಂಬಿ ಕಟ್ಟಡಗಳ ಅನಿಯಂತ್ರಿತ ನಿರ್ಮಾಣ ಹಾಗೂ ಪಾರಿಸಾರಿಕವಾಗಿ ಸೂಕ್ಷ್ಮಸಂವೇದಿ ಗಣಿಗಾರಿಕೆಯಂತಹ ಗಂಭೀರ ಪಾರಿಸಾರಿಕ ಸಮಸ್ಯೆಗಳಿಗೆ ಸಂಬಂಧಿಸಿ ನ್ಯಾಯಾಧೀಕರಠಣವು ಸ್ವಯಂಪ್ರೇರಿತವಾಗಿ ತನ್ನ ಅಧಿಕಾರವನ್ನು ಚಲಾಯಿಸಬೇಕೆಂದು ಸಮಿತಿಯು ಪ್ರತಿಪಾದಿಸಿದೆ.
ಪರಿಸರ ಸಂಬಂಧಿ ವಿಷಯಗಳ ಕುರಿತು ಸಕಾಲದಲ್ಲಿ ನ್ಯಾಯದಾನವನ್ನು ಒದಗಿಸುವ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಉನ್ನತ ನ್ಯಾಯಾಲಯಗಳ ಹೊರೆಯನ್ನು ಕಡಿಮೆಗೊಳಿಸಿದೆ ಹಾಗೂ ಸರಳವಾದ ಪ್ರಕ್ರಿಯೆಗಳು, ತಂತ್ರಜ್ಞಾನ ಬಳಕೆ ಹಾಗೂ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವ ಮೂಲಕ ನ್ಯಾಯದಾನದಲ್ಲಿ ಸುಧಾರಣೆ ಮಾಡಿದೆ ಎಂದು ಸಮಿತಿ ಗಮನಸೆಳೆದಿದೆ.

