ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡಬೇಕೆಂಬ ಪಟ್ಟನ್ನು ಮುಂದುವರಿಸಿರುವ ವಿಪಕ್ಷ ಬಿಜೆಪಿ, ಭಾನುವಾರ ಶಿಮ್ಲಾದ ಗಾಂಧಿ ಪ್ರತಿಮೆ ಬಳಿ ಒಂದೂವರೆ ಗಂಟೆ ಪ್ರತಿಭಟನೆ ನಡೆಸಿದೆ.
ಬಳಿಕ, ಬಿಜೆಪಿ ನಾಯಕರು ಮತ್ತು ನೂರಾರು ಕಾರ್ಯಕರ್ತರು ಸಾಮೂಹಿಕವಾಗಿ ವಂದೇ ಮಾತರಂ ಹಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜೈರಾಂ ಠಾಕೂರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ವಂದೇ ಮಾತರಂ ಗೀತೆಯು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿತ್ತು. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ದೇಶಭಕ್ತಿಯೊಂದಿಗೆ ಸಂಬಂಧ ಹೊಂದಿತ್ತು ಎಂದು ಠಾಕೂರ್ ಹೇಳಿದ್ದಾರೆ. ಸದನದಲ್ಲಿ ವಂದೇ ಮಾತರಂ ಅನ್ನು ಅತ್ಯಂತ ಗೌರವಪೂರ್ವಕವಾಗಿ ಹಾಡಬೇಕೆಂದು ಪಕ್ಷ ಒತ್ತಾಯಿಸಿತ್ತು ಎಂದು ಅವರು ಹೇಳಿದ್ದಾರೆ.
ಕಲಾಪದ ಪ್ರಸ್ತಾಪಿತ ಪ್ರಮುಖ ಅಂಶಗಳಲ್ಲಿ ವಂದೇ ಮಾತರಂ ಅನ್ನು ಸೇರಿಸಲಾಗಿತ್ತು. ಕಲಾಪ ಆರಂಭಕ್ಕೂ ಮುನ್ನ ಅದನ್ನು ತೆಗೆದುಹಾಕಲಾಗಿದೆ ಎಂದು ಅವರು ದೂರಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ಮೊದಲೆರಡು ದಿನಗಳ ಕಲಾಪ ವಂದೇ ಮಾತರಂ ಕುರಿತ ಗದ್ದಲ, ಕೋಲಾಹಲದಲ್ಲೇ ಕಳೆದಿದೆ.
ಆಗಸ್ಟ್ 21ರಂದು ಸದನ ಆರಂಭವಾಗುತ್ತಿದ್ದಂತೆ ರಾಷ್ಟ್ರಗೀತೆ ಜೊತೆಗೆ ರಾಷ್ಟ್ರೀಯ ಗೀತೆ ಹಾಡಿಲ್ಲವೆಂಬುದು ಬಿಜೆಪಿಯ ಆಕ್ಷೇಪವಾಗಿದೆ. ನಮ್ಮ ಮನವಿಗೂ ಸ್ಪೀಕರ್ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಧಿವೇಶನದ ಅಂತ್ಯದಲ್ಲಿ ರಾಷ್ಟ್ರೀಯ ಗೀತೆ ಆಡುವುದಾಗಿ ಸ್ಪೀಕರ್ ಹೇಳಿದ್ದು ಬಿಜೆಪಿಗರನ್ನು ಕೆರಳಿಸಿದೆ.
ಸದನವು ತನ್ನದೇ ಆದ ನಿಯಮ, ಸಂಪ್ರದಾಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಕಲಾಪವು ರಾಷ್ಟ್ರಗೀತೆ ಹಾಡುವುದರೊಂದಿಗೆ ಆರಂಭವಾಗುತ್ತದೆ. ಕಲಾಪದ ಅಂತ್ಯದಲ್ಲೂ ರಾಷ್ಟ್ರಗೀತೆ ಹಾಡಲಾಗುತ್ತದೆ ಎಂದು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಹೇಳಿದ್ದಾರೆ.
ವಿವಾದದ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದು, ಸದನದಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಬಿಜೆಪಿಗರು ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪ ತಳ್ಳಿಹಾಕಿರುವ ಠಾಕೂರ್, ಸದನದ ವಿಡಿಯೊ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ಶಾಸಕರಾದ ವಿಪಿನ್ ಸಿಂಗ್ ಪರ್ಮಾರ್, ವಿಕ್ರಮ್ ಠಾಕೂರ್, ರಾಕೇಶ್ ಜಮ್ವಾಲ್, ತ್ರಿಲೋಕ್ ಜಮ್ವಾಲ್, ಸುಧೀರ್ ಶರ್ಮಾ, ಆಶಿಶ್ ಶರ್ಮಾ ಮತ್ತು ಪವನ್ ಕಾಜಲ್ ಮತ್ತತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾರ್ಯಕರ್ತರು ಸಹ ಅವರಿಗೆ ಸಾಥ್ ನೀಡಿದ್ದರು.

