ಕಾಸರಗೋಡು: ಪ್ರೀತಿ, ಐಶ್ವರ್ಯ ಹಾಗೂ ಸಮೃದ್ಧಿಯ ಸಂಕೇತವಾಗಿ ಕೇರಳಾದ್ಯಂತ ಆ.26ರಂದು ಸಂಭ್ರಮದ ತಿರುವೋಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇರಳವನ್ನು ಬಾಧಿಸಿರುವ ಜಲಪ್ರಳಯ, ನಿತ್ಯೋಪಯೋಗಿ ಸಾಮಗ್ರಿ ಬೆಲೆಯೇರಿಕೆ ನಡುವೆಯೂ ರಾಜ್ಯದ ಜನತೆ ಹೂವಿನಹಬ್ಬದ ಸಂಭ್ರವನ್ನಾಚರಿಸುತ್ತಿದ್ದಾರೆ. ವರ್ಷದಲ್ಲಿ ಒಂದು ಬಾರಿ ತನ್ನ ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ನಾಡಿಗೆ ಆಗಮಿಸುತ್ತಿರುವ ಮಹಾಬಲಿಯನ್ನು ಹೂವಿನ ರಂಗೋಲಿ ಹಾಕಿ ಬರಮಾಡಿಕೊಳ್ಳುವುದು ಓಣಂ ಹಬ್ಬದ ವಿಶೇಷತೆಯಾಗಿದೆ.
'ಅತ್ತಂ ಪತ್ತ್ ಪೊನ್ನೋಣಂ'ಎಂಬಂತೆ ಅತ್ತಂನಿಂದ ಆರಂಭಗೊಳ್ಳುವ ಓಣಂ ಉತ್ಸವ ಹತ್ತನೇ ದಿನ ಪೊನ್ನೋಣಂ ನೊಂದಿಗೆ ಸಂಪನ್ನಗೊಳ್ಳುತ್ತಿದೆ. ಮುಖ್ಯವಾಗಿ ಹೂವಿಗೆಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸುವ ಓಣಂ ಹಬ್ಬಕ್ಕೆ ಕೇರಳದಲ್ಲಿ ಸ್ವಂತವಾಗಿ ಹೂವು ಬೆಳೆಸುತ್ತಿದ್ದರೂ, ತಮಿಳ್ನಾಡು, ಕರ್ನಾಟಕದಿಂದಲೂ ಭಾರೀ ಪ್ರಮಾಣದ ಹೂವು ಮಾರಾಟಕ್ಕಾಗಿ ಕೇರಳಕ್ಕೆ ಆಗಮಿಸುತ್ತಿದೆ. ಇದರ ಜತೆಗೆ ತರಕಾರಿ, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.ತರಕಾರಿ ಬೆಲೆಯಲ್ಲಿ ಶೇ. 25ರಷ್ಟು ಹೆಚ್ಚಳವುಂಟಾಗಿದೆ.
ರಾಜ್ಯದ ಜನತೆ ಹೆಚ್ಚಾಗಿ ಪ್ರೀತಿಸುವ ನೇಂದ್ರ ಬಾಳೆಹಣ್ಣಿನ ಧಾರಣೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಿಂಗಳ ಹಿಂದೆ ಕಿಲೋ ಒಂದಕ್ಕೆ 50ರಿಂದ 60ರೂ. ಇದ್ದ ನೇಂದ್ರ ಬಾಳೆಹಣ್ಣು 90ರೂ ಅಂಚಿಗೆ ತಲುಪಿದೆ. ಇನ್ನು ಅಕ್ಕಿ, ಕಾಳುಬೇಳೆಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದ್ದು, ಈ ಬಾರಿಯ ಓಣಂ ಹಬ್ಬ ಜನಸಾಮಾನ್ಯರ ಪಾಲಿಗೆ ಭಾರೀಬಿಸಿ ಮುಟ್ಟಿಸಿದೆ.
ಓಣಂ ಹಬ್ಬದ ಅಂಗವಾಗಿ ಕ್ರೀಡೆಗಳಿಗೆ ವಿಶೇಷ ಮಹತ್ವ ಕಲ್ಪಿಸಲಾಗುತ್ತಿದೆ. ಇದರಲ್ಲಿ ಹಗ್ಗ ಜಗ್ಗಾಟ ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಆಡುತ್ತಿದ್ದಾರೆ. ಯುವತಿಯರಿಗಾಗಿ ಜೋಕಾಲಿಯಾಟ, ತಿರುವಾದಿರ, ಲಗೋರಿ, ಪದಬಂಡಿ, ಪದ್ಯಬಂಡಿ ರಚನೆ, ಗಾಳಿಪಟ ಹಾರಾಟ, ಭಕ್ತಿಗಾನ, ಭದ್ಮವೇಷ, ಪಂಚವಾದ್ಯ ವಾದನ, ತಾಯಂಬಕ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ.
: ಮಹಾಬಲಿಯ ಸ್ವಾಗತಿಸಲು ಹೂವಿನ ರಂಗೋಲಿ

