ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಎದುರಾದ ಸೋಲು ತಮ್ಮನ್ನು ಮನರಂಜನಾ ಕ್ಷೇತ್ರಕ್ಕೆ ಮರಳುವಂತೆ ಮಾಡಿತು ಎಂದು ನಟಿ, ರಾಜಕಾರಣಿ ಸ್ಮೃತಿ ಇರಾನಿ ಹೇಳಿಕೊಂಡಿದ್ದಾರೆ.
'ಟೈಮ್ಸ್ ನೌ'ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಇರಾನಿ, ಮನರಂಜನಾ ಕ್ಷೇತ್ರದಲ್ಲಿರುವವರಿಗೆ ತಾವಾಗಿಯೇ ಕರೆ ಮಾಡಿ ಕೆಲಸಕ್ಕಾಗಿ ವಿಚಾರಿಸಿದ್ದಾಗಿ ಹಾಗೂ ಆ ಅನುಭವವು ತಮಗೆ ಯಾವುದೇ ಕಟ್ಟುಪಾಡುಗಳಿಲ್ಲದ ಸ್ವಾತಂತ್ರ್ಯದ ಭಾವನೆ ಮೂಡಿಸಿತ್ತು ಎಂದು ತಿಳಿಸಿದ್ದಾರೆ.
'ಆ (ಕೆಲಸ ಕೇಳಿದ ಸಂದರ್ಭದಲ್ಲಿ ದೊರೆತ) ಅನುಭವವು ಹಲವು ಆಯಾಮಗಳಲ್ಲಿ ನನಗೆ ಸ್ವಾತಂತ್ರ್ಯದ ಭಾವನೆ ಮೂಡಿಸಿದೆ. ಮೊದಲನೆಯದಾಗಿ, ರಾಜಕೀಯದಲ್ಲಿ ನಾನು ಏನನ್ನಾದರೂ ಸಾಬೀತು ಮಾಡುವ ಅಗತ್ಯವಿತ್ತು. ಆದರೆ, ನಿಮ್ಮ ಕೊಡುಗೆ ಯಾರಿಗೆ ಬೇಕಾಗಿದೆ ಮತ್ತು ಅವರಿಗೆ ಏನು ಕೊಡಬೇಕು ಎಂಬುದು 2024ರ ಸೋಲಿನ ನಂತರ ನಿರ್ಣಾಯಕವಾಯಿತು. ಬಳಿಕ, ಹಲವರಿಗೆ ಕರೆ ಮಾಡಿದ್ದೆ. ನನಗೀಗ ಕೆಲಸವಿಲ್ಲ. ದಯವಿಟ್ಟು ಕೆಲಸ ನೀಡಿ ಎಂದು ಕೇಳಿದ್ದೆ. ಜಿಯೊ ಹಾಟ್ಸ್ಟಾರ್ ಉಪಾಧ್ಯಕ್ಷ ಉದಯ್ ಶಂಕರ್ ಅವರು ನಾನು ಕೆಲಸ ಗಿಟ್ಟಿಸಿಕೊಳ್ಳಲು ನೆರವಾದರು. ಒಂದು ಕಾಲದಲ್ಲಿ, ನನ್ನ ಕೆಲಸ ಹೋಗಲು ಅವರೇ ಕಾರಣರಾಗಿದ್ದರು' ಎಂದು ಹೇಳಿದ್ದಾರೆ.
'ನಾನು ಕೆಲಸ ಕೇಳಿದ್ದಾಗ ಅಚ್ಚರಿಗೊಂಡಿದ್ದ ಉದಯ್ ಶಂಕರ್, ನಿಜವಾಗಲೂ ಈ ಮಾತು ಹೇಳುತ್ತಿದ್ದೀರಾ? ಕೇಂದ್ರ ಸಚಿವೆಯಾಗಿ ಕೆಲಸ ಮಾಡಿದವರು ಮತ್ತೊಮ್ಮೆ ನಟನೆಗೆ ಮರಳಲು ಬಯಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ನನಗೆ ಕೆಲಸದ ಅಗತ್ಯವಿದೆ. ಮನರಂಜನಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂಬುದಾಗಿ ಭಾವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದೆ' ಎಂದಿದ್ದಾರೆ.
'ಬಣ್ಣದ ಬದುಕಿನಿಂದ ಸಾಕಷ್ಟು ಸಮಯದಿಂದ ದೂರ ಉಳಿದಿದ್ದೀರಿ, ಈಗ ಕೆಲಸಕ್ಕೆ ಹೇಗೆ ಹೊಂದಿಕೊಳ್ಳುವಿರಿ ಎಂದು ಸಾಕಷ್ಟು ಜನರು ಅಚ್ಚರಿಯಿಂದ ಕೇಳಿದ್ದರು. ನೀವು 12 ಗಂಟೆವರೆಗೆ ಕೆಲಸ ಮಾಡಬೇಕಾಗಬಹುದು. ಕೆಲಸದಿಂದ ಸಂಪೂರ್ಣವಾಗಿ ಹೊರಗೆ ಇದ್ದುಬಿಡಲು ಆಗುವುದಿಲ್ಲ. ಉದ್ಯೋಗಿಯಾಗಿ ಕೆಲಸ ಮಾಡುವುದು ಖಚಿತವೇ ಎಂದೂ ಪ್ರಶ್ನಿಸಿದ್ದರು' ಎಂಬುದಾಗಿ ನೆನಪಿಸಿಕೊಂಡಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಇರಾನಿ ಅವರು, 'ಕೆಲಸದ ಅನಿವಾರ್ಯತೆ ಬಗ್ಗೆ ತಿಳಿದವರಿಗಷ್ಟೇ ಪರಿಸ್ಥಿತಿ ಅರ್ಥವಾಗುತ್ತದೆ' ಎಂದಿದ್ದಾರೆ.
16 ವರ್ಷಗಳ ನಂತರ ಕಿರುತೆರೆಗೆ ಮರಳಿರುವ ಅವರು, ಟಿವಿ ಕಾರ್ಯಕ್ರಮ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಸೀಸನ್ 2 ರಲ್ಲಿ ಕಾಣಿಸಿಕೊಂಡಿದ್ದಾರೆ.
ಚುನಾವಣಾ ಫಲಿತಾಂಶ
ಸದ್ಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ವಿರುದ್ಧ 2014ರಲ್ಲಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಇರಾನಿ, 2019ರಲ್ಲಿ ಅಮೋಘ ಜಯ ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರಿದ್ದರು. ಆದರೆ, 2024ರಲ್ಲಿ ಅವರಿಗೆ ಗೆಲುವು ದಕ್ಕಲಿಲ್ಲ. ಕಾಂಗ್ರೆಸ್ನ ಕಿಶೋರಿ ಲಾಲ್ ಶರ್ಮಾ ಎದುರು 1.6 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುಗ್ಗರಿಸಿದ್ದರು.

