ಕೈರೊ: ಹೊರ್ಮುಜ್ ಜಲಸಂಧಿಯ ಕೆಶ್ಮ್ ದ್ವೀಪದ ಬಳಿ ಇರಾನ್ನ ವಾಣಿಜ್ಯ ಹಡಗಿಗೆ ಕ್ಷಿಪಣಿಯೊಂದು ಭಾನುವಾರ ಅಪ್ಪಳಿಸಿದ್ದು, ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ.
'ಜಲಸಂಧಿ ದಾಟುತ್ತಿದ್ದಾಗ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ನಂತರ ಬೆಂಕಿ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಹಡಗಿನಲ್ಲಿದ್ದವರನ್ನು ಸ್ಥಳಾಂತರಿಸಿದ್ದಾರೆ' ಎಂದು ಸಮುದ್ರ ಕಾರ್ಯಾಚರಣೆಗಳ ಮೇಲೆ ನಿಗಾ ವಹಿಸುವ ಬ್ರಿಟನ್ನ ಸಂಸ್ಥೆ ವರದಿ ಮಾಡಿದೆ.
'ಕ್ಷಿಪಣಿ ದಾಳಿಯ ಹಿಂದೆ ಶತ್ರುಗಳ ಕೈವಾಡ ಇದೆ' ಎಂದು ಕೆಶ್ಮ್ ದ್ವೀಪದ ಗವರ್ನರ್ ಆರೋಪಿಸಿರುವುದಾಗಿ ಇರಾನ್ನ ಸರ್ಕಾರಿ ಸ್ವಾಮ್ಯದ ಟಿವಿ ವರದಿ ಮಾಡಿದೆ.
'ನಮ್ಮನ್ನು ಬೆದರಿಸಿ ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಇರಾನ್ ಶರಣಾಗುವುದಿಲ್ಲ' ಎಂದು ಇರಾನ್ ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್, ಅಮೆರಿಕವನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಂದರು ನಗರಿ ಬಂದರ್ ಅಬ್ಬಾಸ್ನಿಂದ 22 ಕಿ.ಮೀ ದೂರದಲ್ಲಿರುವ ಕೆಶ್ಮ್ ದ್ವೀಪವು, ಹೊರ್ಮುಜ್ ಜಲಸಂಧಿಯೊಂದಿಗೆ ಸಂಪರ್ಕ ಬೆಸೆಯುವ ಇರಾನ್ನ ಪ್ರಮುಖ ಜಲ ಮಾರ್ಗವಾಗಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ದಟ್ಟಣೆ ನಿರ್ವಹಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ಇರಾನ್ ಪ್ರಾದೇಶಿಕ ದೇಶಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ.
'ಒಮಾನ್ ಜತೆಗೆ ಒಪ್ಪಂದ ಮಾಡಿಕೊಂಡ ಮಾತ್ರಕ್ಕೆ ಹೊರ್ಮುಜ್ ಜಲಸಂಧಿಯು ಹಡಗು ಸಂಚಾರಕ್ಕೆ ಮುಕ್ತವಾಗುತ್ತದೆ' ಎಂದರ್ಥವಲ್ಲ ಎಂದೂ ಇರಾನ್ ಹೇಳಿದೆ.

