ಅಯೋಧ್ಯೆ: ರಾಮಮಂದಿರ ಟ್ರಸ್ಟ್ನ ನೂತನ ಕಾರ್ಯತಂತ್ರಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದ್ದು, ಅದರ ಫಲಿತಾಂಶಗಳು ಎಲ್ಲರಿಗೂ ಕಾಣಿಸುತ್ತವೆ. ಇದಕ್ಕಾಗಿ ರಾಮ ಭಕ್ತರ ಬೆಂಬಲ ಮತ್ತು ಆಶೀರ್ವಾದವು ನಮ್ಮ ಮೇಲಿರಲಿ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸಿಇಒ ಜಿತೇಂದ್ರ ಮಿಶ್ರಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ.
ನಿವೃತ್ತ ಏರ್ ಮಾರ್ಷಲ್ ಆಗಿರುವ ಜಿತೇಂದ್ರ ಮಿಶ್ರಾ ಅವರು ಸೆ.2ರಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಮೊದಲ ಸಿಇಒ ಆಗಿ ನೇಮಕಗೊಂಡಿದ್ದಾರೆ.
ರಾಮಮಂದಿರ ಟ್ರಸ್ಟ್ ಮೇಲೆ ಭಕ್ತಾದಿಗಳಿಗೆ ಮರಳಿ ನಂಬಿಕೆ ಬರುವಂತೆ ಮಾಡುವುದು ನಮ್ಮ ಪ್ರಮುಖ ಕೆಲಸವಾಗಿದೆ. ನಮಗೆ ಸ್ವಲ್ಪ ಸಮಯ ಕೊಡಿ, ನಾವು ಆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾನು ಇದೀಗ ಇಲ್ಲಿನ ವ್ಯವಸ್ಥೆಯ ಕುರಿತು ತಿಳಿದುಕೊಳ್ಳುತ್ತಿದ್ದೇನೆ. ಟ್ರಸ್ಟ್ನ ಇತರೆ ಸದಸ್ಯರೊಂದಿಗೆ ಚರ್ಚಿಸಿ, ನಮ್ಮ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲಿದ್ದೇವೆ. ಇನ್ನೂ ಕೆಲವೇ ದಿನಗಳಲ್ಲಿ ಅದರ ಫಲಿತಾಂಶವು ಗೋಚರಿಸುತ್ತದೆ ಎಂದು ತಿಳಿಸಿದ್ದಾರೆ.
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರೆ, ಅದನ್ನು ಅನುಷ್ಠಾನಗೊಳಿಸುವ ಮೊದಲು ಮಾಧ್ಯಮಗಳಿಗೆ ತಪ್ಪದೇ ತಿಳಿಸುತ್ತೇವೆ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಮನ ಆಶೀರ್ವಾದಿಂದ ನನಗೆ ಇಷ್ಟು ಮಹತ್ವದ ಜವಾಬ್ದಾರಿ ಸಿಕ್ಕಿದೆ. ಇದಕ್ಕಿಂತ ನಾನು ಬೇರೆ ಏನು ಕೇಳಲಿ? ಈ ಹುದ್ದೆಯನ್ನು ಸರಿಯಾಗಿ ನಿರ್ವಹಿಸುವ ಹೊಣೆ ನನ್ನ ಮೇಲಿದೆ ಎಂದು ಹೇಳಿದ್ದಾರೆ.
ಜಿತೇಂದ್ರ ಮಿಶ್ರಾ ಅವರು ಸಿಇಒ ಆದ ಬಳಿಕ ಮೊದಲ ಬಾರಿ ವೈದೇಯಿ ಭವನದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಗೋವಿಂದ್ ದೇವ್ ಗಿರಿ ಮತ್ತು ಸದಸ್ಯರೊಂದಿಗೆ ವಿಡಿಯೊ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

