ಕೋಲ್ಕತ್ತ: ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳು ಹಿಮಪಾತ, ನದಿಗಳ ಹರಿವಿನ ತಡೆ ಹಾಗೂ ಜಲಪ್ರಳಯಕ್ಕೆ ಕಾರಣವಾಗಿ, ಕೆಳಭಾಗದ ಪ್ರದೇಶಗಳಲ್ಲಿ ಭಾರಿ ವಿನಾಶ ಸೃಷ್ಟಿಸಬಲ್ಲದು. ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ದುರಂತವೇ ಇದಕ್ಕೆ ಸಾಕ್ಷಿ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆಯ (ಜಿಎಸ್ಐ) ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಹೀಗಾಗಿ, ಹಿಮಾಲಯ ಪ್ರದೇಶದ ಅಪಾಯಗಳನ್ನು ಬಿಡಿಬಿಡಿಯಾಗಿ ನೋಡದೆ ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಉಪಗ್ರಹ ಆಧಾರಿತ ವೀಕ್ಷಣೆ, ಕ್ಷೇತ್ರ ಮಟ್ಟದ ಪರಿಶೀಲನೆ ಹಾಗೂ ತಂತ್ರಜ್ಞಾನ ಆಧಾರಿತ ಉಪಕರಣಗಳ ಬಳಕೆಯನ್ನು ಸಂಯೋಜಿಸಿ ಅಧ್ಯಯನ ನಡೆಸಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ವಿಕೋಪದ ಉಪಗ್ರಹ ಚಿತ್ರಗಳನ್ನು ವಿಶ್ಲೇಷಣೆ ಮಾಡಿದಾಗ ಹಿಮಾಲಯದ ಲಾಂಗ್ಟಾಂಗ್ ಪ್ರದೇಶದಲ್ಲಿ ಹಿಮದ ಬಂಡೆ ಕುಸಿದು ಸುಮಾರು 11 ಹೆಕ್ಟೇರ್ ಪ್ರದೇಶದಲ್ಲಿ ನೀರು ಶೇಖರಣೆಯಾಗಿರುವುದು ಕಂಡುಬಂದಿದೆ. ಹಿಮ-ಬಂಡೆಗಳ ಕುಸಿತದಿಂದಾಗಿ ನದಿಯ ಹರಿವಿಗೆ ಹಠಾತ್ ತಡೆಯುಂಟಾಗಿ ನೀರು ಶೇಖರಣೆಯಾಗಿತ್ತು ಎಂಬುದಕ್ಕೆ ಇದು ಪುರಾವೆ ಎಂದು ಜಿಎಸ್ಐನ ಹೆಚ್ಚುವರಿ ಮಹಾನಿರ್ದೇಶಕ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಉತ್ತರ ಮತ್ತು ಮಧ್ಯ ನೇಪಾಳದ ನಗರಗಳು ಹಾಗೂ ಹಳ್ಳಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಭೋಟೆಕೋಶಿ ನದಿಯ ರಭಸದ ಹರಿವಿಗೆ ನೂರಾರು ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಪರ್ವತ ಶ್ರೇಣಿಗಳಲ್ಲಿ ಇಂತಹ ಅಪಾಯಕಾರಿ ವಿಕೋಪಗಳು ಜರುಗುವ ಮುನ್ನವೇ ಅವುಗಳನ್ನು ಗುರುತಿಸುವ ಕಾರ್ಯವಾಗಬೇಕಿದೆ ಎಂದು ಪ್ರದೀಪ್ ಸಿಂಗ್ ಒತ್ತಿಹೇಳಿದ್ದಾರೆ.

