ಚಾರಣಧಾಮ ಪ್ರವಾಸಿಗರ ಸ್ವರ್ಗ ರಾಣಿಪುರಂ ಅಭಿವೃದ್ಧಿಗೆ 100 ಕೋಟಿ ರೂ.ಬೃಹತ್ ಯೋಜನೆ ಪಿಪಿಪಿ ಮಾಡೆಲ್ ಮೂಲಕ ಅಭಿವೃದ್ಧಿಗೆ ಹೊಸ ದಿಶೆ
0
ಡಿಸೆಂಬರ್ 12, 2018
3 ಕಿ.ಮೀ ದೂರದಿಂದ ಕೇಬಲ್ ಕಾರು, ಸಾಹಸ ಕ್ರೀಡೆಗಳ ಉತ್ತೇಜನಕ್ಕೆ ಕ್ರಮ
ಕಾಸರಗೋಡು: ಜಿಲ್ಲೆಯ ಪ್ರವಾಸಿ ಕೇಂದ್ರ ಚಾರಣಧಾಮ ರಾಣಿಪುರಂ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. 100 ಕೋಟಿ ರೂ. ಮೊತ್ತದಲ್ಲಿ ಹೊಸ ಪ್ರವಾಸೋದ್ಯಮ ಯೋಜನೆ ಸಾಕಾರಗೊಳ್ಳಲಿದೆ. ಅಭಿವೃದ್ಧಿ ಯೋಜನೆಯ ಭಾಗವಾಗಿ ಚಾರಣಧಾಮದ ಸಮೀಪ ಕೇಬಲ್ ಕಾರು ಪ್ರವಾಸ ಮತ್ತು ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಸುವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿದೆ. ಕೇಬಲ್ ಕಾರು ಪಯಣಕ್ಕೆ ಪೂರಕವಾಗಿರುವ ಸ್ಥಳವನ್ನು ಗೊತ್ತುಪಡಿಸಲಾಗಿದ್ದು. ಟೂರಿಸಂ ಸಕ್ರ್ಯೂಟ್ ಒಳಪಡುವಂತೆ ರಾಣಿಪುರಂ ಚಾರಣಧಾಮದ ಸಮೀಪದಲ್ಲಿರುವ ಏಳು ಎಕರೆ ಸ್ಥಳದಲ್ಲಿ ಹೊಸ ಪ್ರವಾಸಿ ಯೋಜನೆ ಅನಾವರಣಗೊಳ್ಳಲಿದೆ.
ಚಂಗನಶ್ಯೇರಿಯ ಅಪ್ಲೈಡ್ ಪ್ರಾಪರ್ಟಿಸ್ ಅಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಭೂ ಸ್ಥಳದ ರೇಖಾಚಿತ್ರವನ್ನು ಹಸ್ತಾಂತರಿಸಿದರು. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಪ್ರಾಥಮಿಕ ಹಂತದ ಕೆಲಸ ಕಾರ್ಯಗಳಿಗೆ ಅಂಕಿತ ಹಾಕಲಾಗಿದೆ. ಇದಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯತೆಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಕಂಪೆನಿ ಅಧಿಕೃತರು ತಿಳಿಸಿದ್ದಾರೆ. ಯೋಜನೆಯಡಿ ಚಾರಣಧಾಮದ ಬೆಟ್ಟ ಪ್ರದೇಶದಲ್ಲಿ ಗ್ಲಾಸ್ ಹೌಸ್ ನಿರ್ಮಾಣವಾಗಲಿದೆ. ಈ ಯೋಜನೆಗೆ ಪೂರಕವಾಗಿರುವ ಖಾಸಗಿ ಸಹಭಾಗಿತ್ವವನ್ನು ಡಿ.ಟಿ.ಪಿ.ಸಿ ಈ ಹಿಂದೆಯೇ ಅಪೇಕ್ಷಿಸಿತ್ತು ಎಂದು ಹೇಳಲಾಗಿದೆ. ಕಲ್ಲಿಕೋಟೆಯ ಖಾಸಗಿ ಸಂಸ್ಥೆ ಅಧಿಕೃತರು ಮುಂದಿನ ವಾರ ರಾಣಿಪುರಕ್ಕೆ ಆಗಮಿಸಿ, ಗ್ಲಾಸ್ ಹೌಸ್ ನಿರ್ಮಾಣ ಕಾರ್ಯದ ಬಗ್ಗೆ ಅಧ್ಯಯನ ನಡೆಸಲಿದ್ದಾರೆ ಎಂದು ಡಿ.ಟಿ.ಪಿ.ಸಿ ಪ್ರಬಂಧಕ ಪಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.


