ಕಾಸರಗೋಡು: ಉಳಿಯತ್ತಡ್ಕ ಸನಿಹದ ಭಗವತೀನಗರದ ನಿವಾಸಿ, ದಿ. ಕಿಟ್ಟು ಪೂಜಾರಿ-ಕೊರಪ್ಪಾಳು ದಂಪತಿ ಪುತ್ರ, ಜಿಲ್ಲೆಯ ಹಿರಿಯ ಪತ್ರಕರ್ತ ಕೆ. ಗಣೇಶ(68)ದೀರ್ಘ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು. ಕಾಸರಗೋಡಿನಿಂದ ಪ್ರಕಟಗೊಳ್ಳುತ್ತಿದ್ದ 'ಗಡಿನಾಡು'ಸಂಜೆ ಪತ್ರಿಕೆ ಪ್ರಕಾಶಕ-ಸಂಪಾದಕರಾಗಿ ಜಿಲ್ಲೆಯಲ್ಲಿ ಕನ್ನಡ ಪತ್ರಿಕೆ ಆರಂಭಿಸಿ ಮುನ್ನಡೆಸಿದ ಖ್ಯಾತಿ ಇವರಿಗಿದೆ. 1980-90ರ ಕಾಲಘಟ್ಟದಲ್ಲಿ ಜನಪ್ರಿಯ ಸಂಜೆ ಪತ್ರಿಕೆಯಾಗಿ ಗಡಿನಾಡನ್ನು ಕಟ್ಟಿಬೆಳೆಸುವುದರ ಜತೆಗೆ 90ರ ದಶಕದಲ್ಲಿ ನಾಲ್ಕು ಸಂಜೆ ಪತ್ರಿಕೆಗಳು ಯಶಸ್ವಿಯಾಗಿ ಪ್ರಕಟಗೊಳ್ಳುವಲ್ಲಿ ಗಡಿನಾಡು ಪ್ರೇರಣೆಯಾಗಿತ್ತು. ಪತ್ರಕರ್ತರಾಗಿ ಸಲ್ಲಿಸಿದ ಇವರ ಸೇವೆ ಪರಿಗಣಿಸಿ ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅವರ ಮನೆಗೆ ತೆರಳಿ ಅವರನ್ನು ಗೌರವಿಸಲಾಗಿತ್ತು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


