ಗುವಾಹಟಿ: 'ರಾಜ್ಯದಲ್ಲಿ ಹಿಂಸಾಚಾರ ಕೊನೆಗೊಂಡು, ಶಾಂತಿ ನೆಲಸಬೇಕು ಎನ್ನುವುದು ಎಲ್ಲ ಸಮುದಾಯದ ಜನರ ಒಕ್ಕೊರಲ ಅಭಿಲಾಷೆ. ಆದರೆ, ಉಖ್ರುಲ್ ಜಿಲ್ಲೆಯಲ್ಲಿ ಏಪ್ರಿಲ್ 7ರಂದು ಇಬ್ಬರು ಮಕ್ಕಳು ಕೊಲೆಯಾದ ಘಟನೆಯಿಂದಾಗಿ ಶಾಂತಿ ಮಾತುಕತೆಗೆ ತೊಡಕಾಗಿದೆ' ಎಂದು ಮಣಿಪುರ ಮುಖ್ಯಮಂತ್ರಿ ವೈ.ಖೇಮ್ಚಂದ್ ಸಿಂಗ್ ಬುಧವಾರ ಹೇಳಿದರು.
ಪಶ್ಚಿಮ ಇಂಫಾಲ್ನಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ನಾಗಾ ಸಮುದಾಯದಪ್ರಾಬಲ್ಯ ಇರುವ ಉಖ್ರುಲ್ ಜಿಲ್ಲೆಯ ವಿವಿಧಡೆ ನಾನು ಭೇಟಿ ನೀಡುತ್ತಿದ್ದೇವೆ. ಜನರ ಸಂಕಷ್ಟಗಳನ್ನು ಆಲಿಸುತ್ತಿದ್ದೇನೆ. ಮಕ್ಕಳ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು' ಎಂದು ಭರವಸೆ ನೀಡಿದರು. ಏಪ್ರಿಲ್ 7ರಿಂದ ಈಚೆಗೆ ರಾಜ್ಯದ ವಿವಿಧೆಡೆ ಒಟ್ಟು 11 ಸಾವುಗಳಾಗಿವೆ.
ಮೇ 3ಕ್ಕೆ ಮೂರು ವರ್ಷ: ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ಮಧ್ಯೆ ಸಂಘರ್ಷ ಭುಗಿಲೆದ್ದು ಮೇ 3ಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿದೆ. ಈ ಕಾರಣ ಮಣಿಪುರ ಒಗ್ಗಟ್ಟು ಸಹಕಾರ ಸಮಿತಿಯು (ಸಿಒಸಿಒಎಂಐ) ಅದೇ ದಿನ ಇಂಫಾಲ್ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಸರ್ಕಾರದೊಂದಿಗೆ ಶಾಂತಿ ಮಾತುಕತೆ ನಡೆಸುವ ಬಗ್ಗೆ ಈ ಕಾರ್ಯಕ್ರಮದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಮಿತಿ ಹೇಳಿತ್ತು. ಈ ವೇಳೆಯೇ ಮುಖ್ಯಮಂತ್ರಿ ಅವರು ಈ ಹೇಳಿಕೆ ನೀಡಿದ್ದಾರೆ.
ಕುಕಿ ಸಮುದಾಯದಿಂದ ಪ್ರತಿಭಟನೆ
ಚುರಾಚಾಂದಪುರ (ಪಿಟಿಐ): ಏಪ್ರಿಲ್ 24ರಂದು ಉಖ್ರುಲ್ ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿಯಾದ ಘಟನೆ ಖಂಡಿಸಿ ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಬುಧವಾರ ಪ್ರತಿಭಟನೆ ಮತ್ತು ರ್ಯಾಲಿಗಳು ನಡೆದವು. ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಧ್ವನಿ ಮುದ್ರಿಕೆ ಕುರಿತು ಕಠಿಣ ಕ್ರಮ ಜರುಗಿಸಬೇಕೆಂಬುದು ಪ್ರತಿಭಟನಕಾರರು ಪ್ರಮುಖ ಬೇಡಿಕೆಯಾಗಿತ್ತು. 2024ರಲ್ಲಿ ಈ ಧ್ವನಿ ಮುದ್ರಿಕೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ತೀವ್ರಗೊಳ್ಳಲು ಕಾರಣವಾಗಿತ್ತು. ಮಾನವ ಹಕ್ಕುಗಳಿ ಗಾಗಿನ ಕುಕಿ ಮಹಿಳಾ ಸಂಘಟನೆ, ಕುಕಿ ಮಹಿಳಾ ಒಕ್ಕೂಟಗಳ ನೇತೃತ್ವದಲ್ಲಿ ಚುರಾ ಚಾಂದಪುರ ಸೇರಿ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು.

