ಮಂಜೇಶ್ವರ: ಅವಿಭಜಿತ ದ.ಕ ಹಾಗೂ ಕಾಸರಗೋಡು ಜಿಲ್ಲೆಯನ್ನು ನಡುಗಿಸಿದ್ದ ರಿಪ್ಪರ್ ಚಂದ್ರನ್ಗೆ ಗಲ್ಲು ಶಿಕ್ಷೆ ಲಭಿಸುವಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಮಂಜೇಶ್ವರ ವಾಮಂಜೂರು ಚೆಕ್ಪೋಸ್ಟ್ ಸನಿಹದ ಶ್ರೀ ಶಾಸ್ತಾರೇಶ್ವರ ಕ್ಷೇತ್ರ ವಠಾರದ ಶ್ರೀ ಶಾಸ್ತಾ ನಿಲಯದ ಬಾಲಚಂದ್ರ (53) ಅವರ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಹಾಯಕ ಅರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಚಂದ್ರ ಅವರು ಕಳೆದ ಮೂರು ದಿವಸಗಳಿಂದ ಮೊಬೈಲ್ ಕರೆ ಸವೀಕರಿಸದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಸಹೋದರಿ ಶಶಿಕಲಾ ಅವರು ಮನೆಗೆ ತಲುಪಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.
ಬಾಲಚಂದ್ರ ಅವರು ರಿಪ್ಪರ್ ಚಂದ್ರನ್ ತಂಡದಿಂದ ಕೊಲೆಗೀಡಾಗಿದ್ದ ನರಸಪ್ಪಯ್ಯ ಹಂದೆ-ಇಂದಿರಾ ಹಂದೆ ದಂಪತಿ ಪುತ್ರ. 1985ರಲ್ಲಿ ರಾತ್ರಿ ಮನೆ ವರಾಂಡದಲ್ಲಿ ಮಲಗಿದ್ದ ನರಸಪ್ಪಯ್ಯ ಹಂದೆ ಅವರ ಕೆಲಸದಾಳು ವಿಶ್ವನಾಥ ಅವರನ್ನು ತಲೆಗೆ ಬಡಿದುಕೊಲೆಗೈದ ನಂತರ, ಮನೆಹ ಹೆಂಚುಸರಿಸಿ ಒಳನುಗ್ಗಿ, ಮಲಗಿ ನಿದ್ರಿಸುತ್ತಿದ್ದ ನರಸಪ್ಪಯ್ಯ ಹಂದೆ ಅವರ ತಲೆಗೆ ಬಡಿದು ಕೊಲೆಗೈದಿದ್ದು, ತಡೆಯಲು ಬಂದ ಪತ್ನಿ ಇಂದಿರಾ ಅವರಿಗೂ ತಲೆಗೆ ಬಡಿದು ಗಂಭೀರ ಗಾಯಗೊಳಿಸಿದ್ದನು. ಅರೆಪ್ರಜ್ಞಾವಸ್ಥೆಗೆ ಜಾರಿದ್ದ ಇಂದಿರಾ ದೀರ್ಘ ಕಾಳದ ಚಿಕಿತ್ಸೆ ನಂತರ ಚೇತರಿಸಿಕೊಮಡಿದ್ದರೂ, ವಯೋಸಹಜ ಕಾಯಿಲೆಯಿಂದ ನಂತರ ಸಾವಿಗೀಡಾಗಿದ್ದರು. ಅವಳಿ ಕೊಲೆ ನಡೆಯುವ ಸಂದರ್ಭ ಬಾಲಚಂದ್ರ ಅವರು 13ರ ಹರೆಯದ ಬಾಲಕನಾಗಿದ್ದು, ಶಶಿಕಲಾ(6)ಹಾಗೂ ಭಾರತಿ(2) ಸಹೋದರಿಯರಿದ್ದರು.
ಪೈಶಾಚಿಕ ಕೃತ್ಯಕ್ಕೆ ಬಾಲಚಂದ್ರ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಒಟ್ಟು 14ಕೊಲೆ ಪ್ರಕರಣಗಳಲ್ಲಿ ರಿಪ್ಪರ್ ಚಂದ್ರನ್ ಆರೋಪಿಯಾಗಿದ್ದು, 13ಪ್ರಕರಣಗಳಲ್ಲಿ ಜೀವಾವಧಿ ಶೀಕ್ಷೆ ಲಭಿಸಿತ್ತು. ನರಸಪ್ಪಯ್ಯ ಹಂದೆ ಕೊಲೆ ಪ್ರಕರಣದಲ್ಲಿ ಬಾಲಚಂದ್ರ ಅವರ ಸಾಕ್ಷಿ ಪರಿಗಣಿಸಿ ಚಂದ್ರನ್ಗೆ ಮರಣದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ರಾಷ್ಟ್ರಪತಿಯವರೂ ಕ್ಷಮಾಅ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ 1991ರಲ್ಲಿ ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿ ರಿಪ್ಪರ್ ಚಂದ್ರನ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ನೀಲೇಶ್ವರ ಮುತ್ತುಕುಟಟಿ ನಿವಾಸಿಯಾಗಿದ್ದ ಚಂದ್ರನ್ ತನ್ನ ಹತ್ತರ ಹರೆಯದಲ್ಲಿತಂದೆಯನ್ನು ಕಳೆದುಕೊಮಡಿದ್ದು, 14ರ ಹರೆಯದಲ್ಲಿ ಕರ್ನಾಟಕ ತೆರಳಿ ನಂತರ ಚಿಕ್ಕಮಗಳೂರಿನ ಮುಡಿಗೆರೆ ಕೊಟ್ಟಿಗೆಹಾರದಲ್ಲಿ ನೆಲೆಸಿದ್ದನು. ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಚಂದ್ರನ್ ನಂತರ ತಿಮ್ಮ ಎಂಬಾತನೊಂದಿಗೆ ಸೇರಿ ಕುಖ್ಯಾತ ಕ್ರಿಮಿನಲ್ ಆಗಿ ಬದಲಾಗಿದ್ದನು.



