ಲಕ್ನೊ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ನಿರ್ವಹಣೆ ಕುರಿತ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ರಾಮ ಜನ್ಮಭೂಮಿ ಚಳವಳಿಯ ಕಾರ್ಯಕರ್ತ ಸಂತೋಷ್ ದುಬೆ ಅವರು ಸುಮಾರು 1,250 ಚಿನ್ನ, ಬೆಳ್ಳಿ, ವಜ್ರಗಳಿಂದ ಅಲಂಕರಿಸಿದ ಹಾಗೂ ಅಷ್ಟಧಾತುವಿನ ಇಟ್ಟಿಗೆಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, ದೇವಾಲಯದ ಆಡಳಿತಾಧಿಕಾರಿ ಗೋಪಾಲ್ ರಾವ್ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.
ಮಂಗಳವಾರ ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ದೇಶ-ವಿದೇಶಗಳ ಭಕ್ತರು ದೇಣಿಗೆಯಾಗಿ ನೀಡಿದ್ದ ಅಮೂಲ್ಯ ಇಟ್ಟಿಗೆಗಳು ಕಾಣೆಯಾಗಿವೆ ಎಂದು ದುಬೆ ಆರೋಪಿಸಿದ್ದಾರೆ ಎಂದು ಣhe ಠಿಡಿiಟಿಣ ವರದಿ ಮಾಡಿದೆ.
ಮಾರಿಷಸ್ನಿಂದ ಕಳುಹಿಸಲಾಗಿದ್ದ ವಿಶೇಷ ಇಟ್ಟಿಗೆ ಹಾಗೂ ಮುಂಬೈ ಮೂಲದ ಉದ್ಯಮಿಯೊಬ್ಬರು ವಜ್ರಗಳಿಂದ ಅಲಂಕರಿಸಿ ದಾನ ಮಾಡಿದ್ದ ಇಟ್ಟಿಗೆಯೂ ನಾಪತ್ತೆಯಾಗಿರುವ ವಸ್ತುಗಳಲ್ಲಿ ಸೇರಿವೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ ನಾಯಕ ದಿವಂಗತ ಅಶೋಕ್ ಸಿಂಘಾಲ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭಕ್ತರು ಮತ್ತು ಕರಸೇವಕರಿಗೆ ಇಟ್ಟಿಗೆಗಳನ್ನು ದಾನ ಮಾಡುವಂತೆ ಕರೆ ನೀಡಿದ್ದರು. ಅದರಂತೆ ಚಿನ್ನ, ಬೆಳ್ಳಿ ಹಾಗೂ ಇತರ ಅಮೂಲ್ಯ ಲೋಹಗಳಿಂದ ತಯಾರಿಸಲಾದ ಇಟ್ಟಿಗೆಗಳನ್ನು ದಾನ ಮಾಡಲಾಗಿತ್ತು. ಕೆಲವು ಇಟ್ಟಿಗೆಗಳು ವಜ್ರಗಳು ಮತ್ತು ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದವು ಎಂದು ದುಬೆ ಹೇಳಿದ್ದಾರೆ.
'ಈ ಅಮೂಲ್ಯ ಇಟ್ಟಿಗೆಗಳು ಕಳೆದ ಕೆಲವು ವರ್ಷಗಳಿಂದ ಕಾಣೆಯಾಗಿವೆ. ಅವುಗಳಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಅವರು ಆರೋಪಿಸಿದ್ದಾರೆ.
ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಖರೀದಿ ವ್ಯವಹಾರಗಳ ಕುರಿತಾಗಿಯೂ ಈ ಹಿಂದೆ ಪ್ರಶ್ನೆಗಳು ಉದ್ಭವಿಸಿದ್ದವು ಎಂದು ದುಬೆ ಹೇಳಿದ್ದಾರೆ. ಟ್ರಸ್ಟ್ಗೆ ಸಂಬಂಧಿಸಿದ ಕೆಲವರ ಆಸ್ತಿ-ಪಾಸ್ತಿಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
'ಒಮ್ಮೆ ಚಾಲಕರಾಗಿದ್ದ ವ್ಯಕ್ತಿಯೊಬ್ಬರು ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳ ಮಾಲೀಕರಾಗಿದ್ದಾರೆ ಎಂಬ ವರದಿಗಳಿವೆ' ಎಂದು ಟಿನ್ನು ಯಾದವ್ ಅವರನ್ನು ಉಲ್ಲೇಖಿಸಿ ಅವರು ಆರೋಪಿಸಿದ್ದಾರೆ.
ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ, ಚಂಪತ್ ರಾಯ್ ಅವರು ಅಸ್ವಸ್ಥರಾಗಿರುವ ಕಾರಣ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ. ಅನಿಲ್ ಮಿಶ್ರಾ ಅವರು ವೈದ್ಯಕೀಯ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಹೊರಗಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ, ದೇಣಿಗೆ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮಂಗಳವಾರ ದೇವಾಲಯದಲ್ಲಿ ದೇಣಿಗೆ ಸಂಗ್ರಹಣೆ, ಎಣಿಕೆ, ಪ್ಯಾಕಿಂಗ್ ಹಾಗೂ ಬ್ಯಾಂಕ್ಗೆ ಠೇವಣಿ ಮಾಡುವ ಪ್ರಕ್ರಿಯೆಯನ್ನು ಸುಮಾರು ಆರು ಗಂಟೆಗಳ ಕಾಲ ಪರಿಶೀಲಿಸಿತು. ದಾಖಲೆಗಳು ಮತ್ತು ಆಡಳಿತಾತ್ಮಕ ಕ್ರಮಗಳನ್ನೂ ಪರಿಶೀಲಿಸಲಾಯಿತು.
ಟ್ರಸ್ಟ್ ಸಿಬ್ಬಂದಿ, ನಗದು ಎಣಿಕೆ ಸಿಬ್ಬಂದಿ ಹಾಗೂ ದೇಣಿಗೆ ನಿರ್ವಹಣೆಯಲ್ಲಿ ತೊಡಗಿರುವ ಇತರರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ.

