ಲಖನೌ: 15 ಜನರ ದುರಂತ ಸಾವಿಗೆ ಕಾರಣವಾದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ಅನಧಿಕೃತ ನಿರ್ಮಾಣದ ಹಿನ್ನೆಲೆಯಲ್ಲಿ 2016ರಲ್ಲೇ ತೆರವು ಆದೇಶ ಹೊರಡಿಸಲಾಗಿತ್ತು. ಆದರೆ, ಕೇವಲ ಎರಡು ತಿಂಗಳಲ್ಲಿ ಆ ಆದೇಶ ರದ್ದುಗೊಳಿಸಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಅಲೀಗಂಜ್ ಪ್ರದೇಶದ ಉಷಾ ಮೆಹ್ತಾ ರಸ್ತೆಯಲ್ಲಿರುವ ಈ ಕಟ್ಟಡವನ್ನು1980ರ ಜುಲೈ 11ರಂದು ಲಾಟರಿ ವ್ಯವಸ್ಥೆಯ ಮೂಲಕ ಬಾಡಿಗೆ ಖರೀದಿ ಯೋಜನೆಯಡಿ ರಾಮೇಶ್ವರ್ ಸಹಾಯ್ ಅವರ ಮಗ ವಿಜಯ್ ಕುಮಾರ್ ಅವರಿಗೆ ಹಂಚಿಕೆ ಮಾಡಲಾಗಿತ್ತು.
1980ರ ನವೆಂಬರ್ 4ರಂದು ಒಪ್ಪಂದ ಪೂರ್ಣಗೊಂಡ ನಂತರ, ಆಸ್ತಿಯ ಸ್ವಾಧೀನವನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಯಿತು.
2005ರಲ್ಲಿ ಈ ಆಸ್ತಿಯನ್ನು ಮಾರಾಟ ಪತ್ರದ (ಸೇಲ್ ಡೀಡ್) ಮೂಲಕ ವಿಜಯ್ ಕುಮಾರ್ ಮತ್ತು ಅವರ ಪತ್ನಿ ಉಷಾ ಅವರ ಹೆಸರಿಗೆ ನೋಂದಾಯಿಸಲಾಯಿತು. ಬಳಿಕ 2013ರ ಜನವರಿ 19ರಂದು ಈ ಆಸ್ತಿಯನ್ನು ವೀರೇಂದ್ರ ಪ್ರತಾಪ್ ಶುಕ್ಲಾ ಮತ್ತು ಸುರೇಂದ್ರ ಪ್ರತಾಪ್ ಶುಕ್ಲಾ ಅವರಿಗೆ ಮಾರಾಟ ಮಾಡಿದ್ದರು.
2014ರ ಆಗಸ್ಟ್ 7ರಂದು ಲಖನೌ ಅಭಿವೃದ್ಧಿ ಪ್ರಾಧಿಕಾರವು (ಎಲ್ಡಿಎ) ವೀರೇಂದ್ರ ಮತ್ತು ಸುರೇಂದ್ರ ಅವರ ಹೆಸರಿಗೆ ಖಾತಾ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು ಎಂದು ಸೋಮವಾರ ತಡರಾತ್ರಿ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಿದೆ.
1,992 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕಟ್ಟಡಕ್ಕೆ 2014ರ ಆಗಸ್ಟ್ 20ರಂದು ಸ್ವಯಂ-ಪ್ರಮಾಣೀಕರಣ ಕಟ್ಟಡ ಯೋಜನೆ ಅಡಿಯಲ್ಲಿ ವಸತಿ ಬಳಕೆಯ ಕಟ್ಟಡ ನಕ್ಷೆಗೆ ಅನುಮೋದನೆ ನೀಡಲಾಗಿತ್ತು. ಆದರೆ, ಕೆಲವು ದಿನಗಳ ಬಳಿಕ ಕಟ್ಟಡದ ಆವರಣದಲ್ಲಿ ಅನಧಿಕೃತ ನಿರ್ಮಾಣ ಮಾಡಿರುವುದು ಪತ್ತೆಯಾಯಿತ್ತು. ಈ ಹಿನ್ನೆಲೆಯಲ್ಲಿ ಲಖನೌ ಅಭಿವೃದ್ಧಿ ಪ್ರಾಧಿಕಾರವು ವೀರೇಂದ್ರ ಪ್ರತಾಪ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿತ್ತು.
ತನಿಖೆಯ ನಂತರ 2016ರ ಮೇ 10ರಂದು ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು. ಆದಾಗ್ಯೂ, ಎರಡು ತಿಂಗಳ ನಂತರ 2016ರ ಜುಲೈ 5ರಂದು ತೆರವು ಆದೇಶ ರದ್ದುಗೊಳಿಸಲಾಯಿತು. ಯಾವ ಸಂದರ್ಭದಲ್ಲಿ ಮತ್ತು ಯಾವ ಕಾರಣಕ್ಕೆ ಈ ಆದೇಶ ಹಿಂಪಡೆಯಲಾಗಿತ್ತು ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದೇ ಕಟ್ಟಡದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕಟ್ಟಡದಲ್ಲಿದ್ದ ಆಯನಿಮೇಷನ್ ಸೆಂಟರ್ನಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು. ಮೃತರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಕೆಲವು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಜಿಗಿದಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಹಲವರನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ರಕ್ಷಿಸಿದ್ದಾರೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ಇನ್ನಷ್ಟೇ ದೃಢಪಡಬೇಕಿದೆ.

