ನವದೆಹಲಿ: ಭಾರತ-ಜಪಾನ್ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಜುಲೈ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಸನೇ ತಕೈಚಿ ಅವರ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಲಾಜಿಸ್ಟಿಕಲ್ ಸವಾಲುಗಳ ಕಾರಣದಿಂದಾಗಿ, ಮುಂಬರುವ ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯನ್ನು ಅಸ್ಸಾಂನಲ್ಲಿ ನಡೆಸುವ ಯೋಜನೆಯನ್ನು ಕೈಬಿಡಲಾಗಿದೆ.
ಈ ಶೃಂಗಸಭೆಯು ದೆಹಲಿಯಲ್ಲೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸನೇ ತಕೈಚಿ ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಈಶಾನ್ಯ ಭಾರತದೊಂದಿಗೆ ತನ್ನ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಜಪಾನ್ ನೀಡುತ್ತಿರುವ ಆದ್ಯತೆಗೆ ಅನುಗುಣವಾಗಿ, ಭಾರತವು ಈ ಶೃಂಗಸಭೆಯನ್ನು ಗುವಾಹಟಿಯಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಂಡಿತ್ತು.
'ಜಪಾನ್ ಸಂಸತ್ತಿನ ಅಧಿವೇಶನ ಸೇರಿದಂತೆ ತಕೈಚಿ ಅವರ ದೇಶೀಯ ಕಾರ್ಯಕ್ರಮಗಳ ಒತ್ತಡವನ್ನು ಗಮನಿಸಿದರೆ, ತಕೈಚಿ ಭಾರತಕ್ಕೆ ಬಂದು ಹೋಗುವ ಸಮಯ ತುಂಬಾ ಕಡಿಮೆ ಇದೆ' ಎಂದೂ ಮೂಲಗಳು ಉಲ್ಲೇಖಿಸಿವೆ.
2019ರ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಂದಿನ ಜಪಾನ್ ಶಿಂಜೋ ಅಬೆ ನಡುವೆ ಗುವಾಹಟಿಯಲ್ಲಿ ನಡೆಯಬೇಕಿದ್ದ ವಾರ್ಷಿಕ ಶೃಂಗಸಭೆಯು, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ರದ್ದಾಗಿತ್ತು.
ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಧಾನಿ ಮೋದಿ ಅವರು ವಾರ್ಷಿಕ ಶೃಂಗಸಭೆಗಾಗಿ ಜಪಾನ್ಗೆ ಪ್ರಯಾಣಿಸಿದ್ದರು. ಶೃಂಗಸಭೆಯ ನಂತರ ಜಪಾನ್ ಮುಂದಿನ ಒಂದು ದಶಕದಲ್ಲಿ ಭಾರತದಲ್ಲಿ 10 ಟ್ರಿಲಿಯನ್ ಯೆನ್ (ಸುಮಾರು ₹60,000 ಕೋಟಿ) ಹೂಡಿಕೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಪ್ರಕಟಿಸಿತ್ತು.
ಅಲ್ಲದೆ, ಎರಡೂ ದೇಶಗಳು ರಕ್ಷಣಾ ಸಂಬಂಧಗಳ ಚೌಕಟ್ಟು ಮತ್ತು ಆರ್ಥಿಕ ಪಾಲುದಾರಿಕೆಯನ್ನು ಗಣನೀಯವಾಗಿ ಹೆಚ್ಚಿಸಲು 10 ವರ್ಷಗಳ ಮಾರ್ಗಸೂಚಿ ಸೇರಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದವು.

