ಬದಿಯಡ್ಕ: ಸಾಮಾಜಿಕ ಜಾಲತಾಣಗಳ ಓದಿಗೆ ಸೀಮಿತವಾಗದೆ, ಯಥಾರ್ಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಓದುವ ಅಭ್ಯಾಸವನ್ನು ಯುವಜನತೆ ಬೆಳೆಸಿಕೊಳ್ಳಬೇಕು. ಕವಿ ಕಯ್ಯಾರ ಕಿಞ್ಞಣ್ಣ ರೈ ಅವರಂತಹ ಮೇರು ವ್ಯಕ್ತಿತ್ವಗಳ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಭಾಷೆ, ಬದುಕು ಹಾಗೂ ಸಂಸ್ಕøತಿಯ ಮೌಲ್ಯಗಳನ್ನು ಅರಿತುಕೊಳ್ಳಬಹುದು ಎಂದು ಕವಿ ಹಾಗೂ ಸಾಹಿತಿ ದಯಾನಂದ ರೈ ಕಳ್ವಾಜೆ ಅಭಿಪ್ರಾಯಪಟ್ಟರು.
ಏತಡ್ಕದ ಸಮಾಜ ಮಂದಿರದಲ್ಲಿ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ವತಿಯಿಂದ ವಾಚನಾ ಪಕ್ಷಾಚರಣೆಯ ಅಂಗವಾಗಿ ಆಯೋಜಿಸಲಾದ ಕವಿ ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
"ಕಯ್ಯಾರರ ಸಾಹಿತ್ಯದಲ್ಲಿ ಸರ್ವಕಾಲಕ್ಕೂ ಅನ್ವಯವಾಗುವ ಭಾಷಾ ಶೈಲಿ, ಪದಜೋಡಣೆ ಹಾಗೂ ಜೀವನ ಸಂದೇಶಗಳು ಹೇರಳವಾಗಿವೆ. ಅವರ ಕಾವ್ಯಗಳು ರಸದೌತಣದಂತಿವೆ. ಕನ್ನಡ ಮತ್ತು ತುಳು ಭಾಷೆಗಳ ಮೇಲಿನ ಅವರ ಅಪಾರ ಪಾಂಡಿತ್ಯ ಇಂದಿಗೂ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಹೆಸರಿನಲ್ಲಿ 'ಕಿಞ್ಞಣ್ಣ' ಎಂದಿದ್ದರೂ ಕನ್ನಡಿಗರಿಗೆ ಅವರು ದೊಡ್ಡಣ್ಣನಂತಿದ್ದಾರೆ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಂಥಾಲಯದ ಅಧ್ಯಕ್ಷ ವೈ.ಕೆ. ಗಣಪತಿ ಭಟ್ ವಹಿಸಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸ್ವಾಗತಿಸಿದರು. ಕುಂಬ್ಡಾಜೆ ಪಂಚಾಯತಿ ಗ್ರಂಥಾಲಯ ಸಮಿತಿ ಸಂಚಾಲಕ ಪ್ರಶಾಂತ್ ಜಿ. ಮುಖ್ಯ ಆಹ್ವಾನಿತರಾಗಿ ಭಾಗವಹಿಸಿ, ಗ್ರಂಥಾಲಯದ ಅಭಿವೃದ್ಧಿ ಹಾಗೂ ಓದು ಸಂಸ್ಕೃತಿಯನ್ನು ವೃದ್ಧಿಸುವ ಕುರಿತು ಮಾರ್ಗದರ್ಶನ ನೀಡಿದರು. ಹಿರಿಯ ಸಾಹಿತಿ ನರಸಿಂಹ ಭಟ್ ಕಟ್ಟದಮೂಲೆ ಅವರು ಕವಿ ಕಯ್ಯಾರರ ಕುರಿತು ತಾವು ರಚಿಸಿದ ಮುಕ್ತಕವನ್ನು ವಾಚಿಸಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಾದ ಕೃತಿಕಾ, ಗಗನ್ ರಾಜ್, ಪಾರ್ಥ ಶರ್ಮ, ರಶ್ಮಿಕಾ ರವಿ ಹಾಗೂ ಯಶ್ವಿತಾ ಅವರು ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗ್ರಂಥಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ ಏತಡ್ಕ ವಂದಿಸಿದರು.

.jpg)
.jpg)
