ಲಖನೌ: 'ಹಲವು ದಶಕಗಳಿಂದ ಬಹುತೇಕ ಭಾರತೀಯರು ಭ್ರಷ್ಟಾಚಾರವನ್ನು ಸಹಜ ಎಂದು ಪರಿಗಣಿಸುವಂತಾಗಿದೆ. ಇದನ್ನು ತೊಲಗಿಸಲು ಭ್ರಷ್ಟಾಚಾರದ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು' ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.
'ಯಾರಾದರೂ ಸಿಕ್ಕಿ ಬೀಳದ ಹೊರತು ಅದು (ಭ್ರಷ್ಟಾಚಾರ) ತಪ್ಪೆಂದು ಅನಿಸಿಕೊಳ್ಳುವುದೇ ಇಲ್ಲ. ದೇಶದಲ್ಲಿ ಪ್ರಾಮಾಣಿಕತೆ ಕುಸಿಯುತ್ತಿದೆ' ಎಂದು ಪ್ರಕರಣವೊಂದರ ತೀರ್ಪಿನಲ್ಲಿ ಅವರು ಹೇಳಿದ್ದಾರೆ.
ರಾಮಮಂದಿರ ಕಾಣಿಕೆ ವಿವಾದವನ್ನೂ ಪ್ರಸ್ತಾಪಿಸಿದ ನ್ಯಾಯಮೂರ್ತಿ, 'ರಾಮಮಂದಿರ ಕಾಣಿಕೆ ಕಳವು ಪ್ರಕರಣ ಸಹನೆಯ ಕಟ್ಟೆ ಒಡೆಯುವಂತಹದ್ದು, ಆದರೂ ಕೆಲವರಿಗೆ ಇದು ನಾಚಿಕೆ ಹುಟ್ಟಿಸುತ್ತಿಲ್ಲ. ಈ ಘಟನೆ ಭಾರತದ ಪ್ರಾಮಾಣಿಕತೆಯ ಅಧೋಗತಿಯಂತಿದೆ' ಎಂದರು.
ಉತ್ತರ ಪ್ರದೇಶದ 'ಬುಲ್ಡೋಜರ್ ನ್ಯಾಯ'ದ ಕುರಿತು ಫೈಮುದ್ದೀನ್ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ತಮ್ಮ ಸಂಬಂಧಿ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಡಿ ಪೊಲೀಸರು ನಮ್ಮ ಮನೆ ಮತ್ತು ವಾಣಿಜ್ಯ ಮಳಿಗೆಗಳನ್ನು ಕೆಡವಲು ಮುಂದಾಗಿದ್ದಾರೆ' ಎಂದು ರಿಟ್ನಲ್ಲಿ ಆರೋಪಿಸಲಾಗಿತ್ತು.
'ಪಾಲಿಕೆ ಸೇರಿ ಎಲ್ಲೆಡೆ ಪ್ರಾಮಾಣಿಕತೆಯ ಕೊರತೆ ಕಾಣುತ್ತಿದೆ. ಅಧಿಕಾರಿಗಳಿಗೆ ಲಂಚ ನೀಡಿ ಬಿಲ್ಡರ್ಗಳು ಮನೆ ಕಟ್ಟುತ್ತಾರೆ. ತೆರವು ಮಾಡುವ ಸಂದರ್ಭ ಬಂದಾಗಲೇ ಜನರಿಗೆ ಅಕ್ರಮ ಎನ್ನುವುದು ತಿಳಿಯುತ್ತದೆ' ಎಂದು ನ್ಯಾಯಮೂರ್ತಿ ಹೇಳಿದರು.
'ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆ ವಿಷಯದಲ್ಲಿ ಕಠಿಣವಾಗಿರಬೇಕು. ಭ್ರಷ್ಟಾಚಾರ ಪ್ರಕರಣದ ಅಪರಾಧಿಗೆ ಮರಣದಂಡನೆ ವಿಧಿಸಲು ಅನುವಾಗುವಂತೆ ಭ್ರಷ್ಟಾಚಾರ ತಡೆ ಕಾಯ್ದೆ-1988ಕ್ಕೆ ತಿದ್ದುಪಡಿ ತರಬೇಕು' ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.

