ಹೈದರಾಬಾದ್: 'ಬಾಲಾಮೃತಂ' ಯೋಜನೆಯಡಿ ನರ್ಸರಿಯಿಂದ 12ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಿಳಿಸಿದ್ದಾರೆ.
'ಬಾಲಾಮೃತಂ' ಯೋಜನೆಯ ಹೊಸ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಇದು 'ಅಭಿವೃದ್ಧಿ ಹೊಂದಿದ ಮತ್ತು ಆರೋಗ್ಯಕರ ತೆಲಂಗಾಣ'ವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ' ಎಂದಿದ್ದಾರೆ.
'ಬಡ ಕುಟುಂಬಗಳ ಪೋಷಕರು ಮುಂಜಾನೆ ಬೇಗ ಎದ್ದು ಕೆಲಸಕ್ಕೆ ತೆರಳುವುದರಿಂದ, ಮಕ್ಕಳಿಗೆ ಉಪಾಹಾರ ತಯಾರಿಸಲು ತಾಯಂದಿರಿಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಈ ಕಾರಣದಿಂದಾಗಿ ಬಾಲಾಮೃತಂ ಯೋಜನೆ ಪರಿಚಯಿಸಲಾಗಿದೆ' ಎಂದು ಹೇಳಿದ್ದಾರೆ.
'ರಾಜ್ಯ ಸರ್ಕಾರವು ಶಿಕ್ಷಣಕ್ಕಾಗಿ ವಾರ್ಷಿಕ ಸುಮಾರು ₹27 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಸಮನಾಗಿ ಮೇಲ್ದರ್ಜೆಗೇರಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ' ಎಂದು ತಿಳಿಸಿದ್ದಾರೆ.
'ಶಿಕ್ಷಣದ ಮೇಲಿನ ವೆಚ್ಚವನ್ನು ಒಂದು ಹೂಡಿಕೆ ಎಂದು ಪರಿಗಣಿಸುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ನಮ್ಮ ಗುರಿಯಾಗಿದೆ. ನಾವು ಇಂತಹ ಯೋಜನೆಗಳನ್ನು ವೋಟ್ ಬ್ಯಾಂಕ್ಗಾಗಿ ಪರಿಚಯಿಸುತ್ತಿಲ್ಲ, ಬದಲಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಪರಿಚಯಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.
'ಬಾಲಾಮೃತಂ'ಯೋಜನೆಯು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಅಡಿಯಲ್ಲಿ ತೆಲಂಗಾಣ ಸರ್ಕಾರದ ಒಂದು ಉಪಕ್ರಮವಾಗಿದ್ದು, ಇದು ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.ಲಖನೌ

