ಕಾಸರಗೋಡು: ಜಿಲ್ಲೆಯಲ್ಲಿ ಓಣಂ ಮಾರುಕಟ್ಟೆಯನ್ನು ಸೆಳೆಯುವ ಉದ್ದೇಶದಿಂದ, 'ಕುಟುಂಬಶ್ರೀ' ಉತ್ಪನ್ನಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಓಣಂ ಮಾರಾಟ ಮೇಳಕ್ಕೆ ಈಗಾಘಲೇ ಚಾಲನೆ ನೀಡಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆಯುತ್ತಿರುವ ಈ ಮೇಳವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೇಳವು ಗುಣಮಟ್ಟದ ಉತ್ಪನ್ನಗಳು ಮತ್ತು ಅಪ್ಪಟ ಸ್ಥಳೀಯ ರುಚಿಯಬನ್ನೊಳಗೊಂಡ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದೆ. ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಲಭ್ಯವಾಗಿಸುವ ಮೂಲಕ ಓಣಂ ಹಬ್ಬದ ಸಂಭ್ರಮವನ್ನು ಎಲ್ಲಾ ಜನತೆಗೂ ತಲುಪಿಸಲು ಜಿಲ್ಲಾ ಕುಟುಂಬಶ್ರೀ ಮಿಷನ್ ಶ್ರಮಿಸುತ್ತಿದೆ. ಈ ಮೇಳದಲ್ಲಿ ಕೇರಳ ಶೈಲಿಯ ಸೀರೆಗಳು, ಸ್ಥಳೀಯವಾಗಿ ಬೆಳೆದ ತರಕಾರಿ, ವಿವಿಧ ಖಾದ್ಯಗಳಾದ ಉಪ್ಪಿನಕಾಯಿಗಳು, ಬೆಲ್ಲ, ಚಿಪ್ಸ್, ಓಣಂ ಹಬ್ಬಕ್ಕೆ ಬೇಕಾದ ಹೂವುಗಳು ಹಾಗೂ ವಿವಿಧ ರೀತಿಯ ಪಾಯಸ ಇಲ್ಲಿ ಲಭ್ಯವಿವೆ. ಕುಟುಂಬಶ್ರೀ ಅಧೀನದಲ್ಲಿಕಾರ್ಯಾಚರಿಸುವ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ಕಲ್ಪಿಸುವುದು ಮತ್ತು ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕುಟುಂಬಶ್ರೀ ಮಾರುಕಟ್ಟೆಗೆ ವಿಶೇಷ ಓಣಂ ಕಿಟ್ಗಳನ್ನು ಪರಿಚಯಿಸುತ್ತಿದೆ. ಕುಟುಂಬಶ್ರೀ ಸಿಡಿಎಸ್ಗಳ ಮೂಲಕ 700 ರವರೆಗಿನ ಬೆಲೆಯ ಕಿಟ್ಗಳನ್ನು ವಿತರಿಸಲಾಗುತ್ತಿದೆ.
ಜಿಲ್ಲಾ ಮಟ್ಟದ ಮೇಳದ ಜೊತೆಗೆ, ಜಿಲ್ಲೆಯ ಪ್ರತಿಯೊಂದು ಸಿಡಿಎಸ್ ವತಿಯಿಂದಲೂ ಎರಡು ಓಣಂ ಮಾರಾಟ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ನಿವಾಸಿಗಳು ತಮ್ಮ ಸಮೀಪದ ಮೇಳಗಳಲ್ಲಿ ಓಣಂ ಮಾರುಕಟ್ಟೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಕೆ. ಸಬೀಶ್, 'ನಬಾರ್ಡ್' ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಕೆ.ಎಸ್. ಶ್ಯಾರನ್ ವಾಸ್, ಚೆಂಗಳ ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಕೀನಾಬಿ ಹಾಗೂ ಜಿಲ್ಲಾಡಳಿತ ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು.
ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಕೆ.ಎಂ. ಕಿಶೋರ್ ಕುಮಾರ್ ಸ್ವಾಗತಿಸಿದರು. ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಟಿ. ಜಿತಿನ್ ವಂದಿಸಿದರು. ಮೇಳವು ಆಗಸ್ಟ್ 22 ರವರೆಗೆ ನಡೆಯಲಿದೆ.



