ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಮಿತ್ರರು ಬೆಂಗಳೂರು ಸಂಸ್ಥೆಯ ವತಿಯಿಂದ ಯಕ್ಷಗಾನ ತಾಳಮದ್ದಳೆ, ಶಿಕ್ಷಕರ ದಿನಾಚರಣೆ ಶನಿವಾರ ನಡೆಯಿತು. ಯಕ್ಷಗಾನ ಅರ್ಥದಾರಿ, ಬರಹಗಾರರು, ಉಪನ್ಯಾಸಕ ರಾಧಾಕೃಷ್ಣ ಕಲ್ಚಾರು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರು ಮಾತನಾಡಿ ಕಲೆಗೆ ಜೀವ ತುಂಬುವ ಕಾಯಕವನ್ನು ಮಾಡುತ್ತಿರುವ ಸಂಸ್ಥೆಯಿಂದ ಸನ್ಮಾನ ಲಭಿಸಿದೆ ಎನ್ನುವುದು ಮನಸ್ಸಿಗೆ ಮುದ ನೀಡಿದೆ. ರಂಗಭೂಮಿಯಲ್ಲಿ ಇನ್ನಷ್ಟು ಸೇವೆ, ಮಾತನಾಡುವ ಅವಕಾಶವೇ ನನಗೆ ಲಭಿಸುವ ಸನ್ಮಾನ ಎಂದರು.
ಹಿರಿಯ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಶುಭಾಶಂಸನೆಗೈದು ಮಾತನಾಡಿ ಸಹೃದಯೀ ತಾಳಮದ್ದಳೆಯ ಅರ್ಥದಾರಿಗಳಿಗೆ ಗೌರವ ಲಭಿಸಿದೆ. ಶಿಕ್ಷಕ ಪ್ರಶಸ್ತಿಯು ಯಕ್ಷಗಾನದ ಗುರುಪೀಠವಾದ ಎಡನೀರು ಮಠದಲ್ಲಿ ಕಲ್ಚಾರು ಅವರಿಗೆ ಲಭಿಸುತ್ತಿರುವುದು ಅಭಿಮಾನದ ವಿಚಾರವಾಗಿದೆ. ನಿರಂತರವಾದ ಜ್ಞಾನ ಯಜ್ಞ ಯಕ್ಷಗಾನದಿಂದ ಲಭಿಸುತ್ತದೆ ಎಂದರು.
ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನವನ್ನು ನೀಡಿ, ಸತತ 5 ವರ್ಷಗಳಿಂದ ಯಕ್ಷಮಿತ್ರರು ಬೆಂಗಳೂರು ಸಂಸ್ಥೆಯ ನಮ್ಮ ಮಠದಲ್ಲಿ ಉತ್ತಮವಾದ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದೆ. ಶಿಕ್ಷಕರ ದಿನಾಚರಣೆಯಂದು ನಮ್ಮ ಸಂಸ್ಕಾರದ ರಕ್ಷಕರಾದ ಶಿಕ್ಷಕರಿಗೆ ಸನ್ಮಾನವನ್ನು ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ಸಂಸ್ಕøತಿಯ ತಿರುಳನ್ನು ಬೆಳೆಸುವ ಕಾರ್ಯ ಶಿಕ್ಷಕರದ್ದು. ಕರಾವಳಿಯ ಭಾಗದಲ್ಲಿ ಮಕ್ಕಳಿಗೆ, ಯುವ ಜನಾಂಗಕ್ಕೆ ಯಕ್ಷಗಾನದ ಮೂಲಕ ಉತ್ತಮ ಸಂಸ್ಕಾರ ಲಭಿಸುತ್ತದೆ. ಶಿಕ್ಷಣ ಹಾಗೂ ಯಕ್ಷಗಾನ ಅರ್ಥಗಾರಿಕೆಯ ಮೂಲಕ ಉತ್ತಮ ಕಲಾವಿದನಿಗೆ ಅಭಿಮಾನ ಸಂದಿದೆ ಎಂದರು.
ಯಕ್ಷಮಿತ್ರರು ಬೆಂಗಳೂರು ಸಂಸ್ಥೆಯ ಶ್ಯಾಮ ಸೂರ್ಯ ನೇತೃತ್ವ ವಹಿಸಿದ್ದರು. ಅರ್ಥದಾರಿ ಹರೀಶ ಬಳಂತಿಮೊಗರು ಕಾರ್ಯಕ್ರಮ ನಿರ್ವಹಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.



