ಕಾಸರಗೋಡು: ನುಳ್ಳಿಪ್ಪಾಡಿಯ ಕನ್ನಡ ಭವನದ ಅಂಗ ಸಂಸ್ಥೆ ಕನ್ನಡ ಭವನ ಪ್ರಕಾಶನದ 3ನೇ ವಾರ್ಷಿಕೋತ್ಸವ ಸಂಭ್ರಮ ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ಜರುಗಿತು.
ಧಾರ್ಮಿಕ ರತ್ನ, ಕನ್ನಡ ಭವನ ನಿರ್ದೇಶಕ ಡಾ. ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸಿದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಜಿಲ್ಲಾಧ್ಯಕ್ಷ, ಪತ್ರಕರ್ತ ಪ್ರದೀಪ್ ಬೇಕಲ್ ಅದ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪುಸ್ತಕ ಬಿಡುಗಡೆ, "ಭರವಸೆಯ ಭಾರತ ರತ್ನ "ಪ್ರಶಸ್ತಿ ಪ್ರದಾನ, ಕವಿತಾ ವಾಚನ -ಗಾಯನ ಕಾರ್ಯಕ್ರಮ ಸಂಭ್ರಮ ನಡೆಯಿತು.
ವೈದ್ಯಕೀಯ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಗೈಯುತ್ತಿರುವ ಡಾ. ಸಚಿನ್ ಬೇಕಲ್ ಅಣಂಗೂರ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ, ಔದ್ಯೋಗಿಕ ಸಾಧನೆ ಗೈಯುತ್ತಿರುವ, ದಯಾವತಿ ಮಂಗಳೂರು ಅವರಿಗೆ "ಭರವಸೆಯ ಭಾರತ ರತ್ನ ಪ್ರಶಸ್ತಿ" ನೀಡಿ ಗೌರವಿಸಲಯಿತು. ಕನ್ನಡ ಭವನದ ರೂವಾರಿಗಳಾದ ಡಾ. ವಾಮನರಾವ್ ಬೇಕಲ್-ಸಂಧ್ಯಾ ರಾಣಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ಖ್ಯಾತ ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಅವರ ಯಾತ್ರಾ ವಿವರಣೆಯ "ಶರದಿಯಾಚೆ ಪ್ರಥಮ ಹೆಜ್ಜೆ "ಕೃತಿಯನ್ನು ಪ್ರದೀಪ್ ಬೇಕಲ್ ಹಾಗೂ ಬೆಂಗಳೂರಿನ ಕವಯತ್ರಿ ಲಕ್ಷ್ಮಿ. ಎಸ್. ಅವರ ಕವನ ಸಂಕಲನ "ಅಂತಧ್ರ್ವನಿ "ಯನ್ನು ಸಾಹಿತಿ ರೇಖಾ ಸುದೇಶ್ ರಾವ್ ಮಂಗಳೂರು ಬಿಡುಗಡೆ ಗೊಳಿಸಿದರು. ಕಾಸರಗೋಡು ನಗರ ಸಭಾ ಸದಸ್ಯರಾದ ಸುಧಾ ರಾಣಿ ಅಣಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಕೆ. ಕಮಲಾಕ್ಷ ಅಣಂಗೂರ್, ರಾಮ ರಾಜ ಕ್ಷತ್ರಿಯ ಸಂಘದ ಕಾಸರಗೋಡು ಘಟಕ ಅಧ್ಯಕ್ಷ ವಿದ್ಯಾನಂದ ಹೂಡೆ, ಮಹಿಳಾ ಸಂಘ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಕಾರ್ಯದರ್ಶಿ ಉಶಾಕಿರಣ್, ಯುವ ಸಂಘ ಅಧ್ಯಕ್ಷ ಮುರಳಿ ಪಾರೆಕಟ್ಟ, ಪಾಂಗೋಡು ನವೀನ್ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭ ಕವಿಗೋಷ್ಠಿ, ಗಾಯನದಲ್ಲಿ ರೇಖಾ ರೋಷನ್, ಸಾಕ್ಷಿ, ಮೋಕ್ಷ, ರೇಖಾ ಸುದೇಶ್ ರಾವ್, ಉಷಾ ಕಿರಣ್, ದಿವ್ಯ ಕೆರೆಮನೆ, ವಸಂತ್ ಕೆರೆಮನೆ, ಕು. ಚೈತಾಲಿ ಮುಂತಾದವರು ಭಾಗವಹಿಸಿದರು. ದಿವ್ಯ ಕೆರೆಮನೆ ಪ್ರಾರ್ಥಿಸಿದರು. ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿದರು. ರೇಖಾ ಸುದೇಶ್ ರಾವ್ -ಉಷಾ ಕಿರಣ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕೋಟೆಕಣಿ ವಂದಿಸಿದರು.



