ಬಂಗಾಳದಲ್ಲಿ ಕಾವೇರಿರುವ ರಾಜಕೀಯದ ನಡುವೆ ಬಿಜೆಪಿಯು ಟಿಎಂಸಿ ಚುನಾವಣಾ ಅಕ್ರಮಗಳಲ್ಲಿ ತೊಡಗಿದೆ ಎಂದು ಆರೋಪಿಸಿದೆ. ರಾಜ್ಯಾದ್ಯಂತ 15 ಮತಗಟ್ಟೆಗಳಲ್ಲಿ ಮರುಮತದಾನದ ನಡುವೆಯೇ ಈ ಆರೋಪಗಳು ಕೇಳಿಬಂದಿವೆ.
ಟಿಎಂಸಿ ನಾಯಕಿ ಶಶಿ ಪಾಂಜಾ ಅವರು ಮೇ 1ರಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಬರೆದಿರುವ ಪತ್ರವು ಇತ್ತೀಚಿನ ಉದ್ವಿಗ್ನತೆಗೆ ಕಾರಣವಾಗಿದೆ. ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಭದ್ರತೆಯಲ್ಲಿ ಇರಿಸಲಾಗಿರುವ ಹಲವಾರು ಕೇಂದ್ರಗಳಲ್ಲಿ ಕಣ್ಗಾವಲು ವ್ಯವಸ್ಥೆಯಲ್ಲಿ ಲೋಪಗಳ ಬಗ್ಗೆ ತನ್ನ ಪತ್ರದಲ್ಲಿ ಗಮನ ಸೆಳೆದಿದ್ದ ಪಾಂಜಾ, ಸಿಸಿಟಿವಿಗಳು ಆಗಾಗ್ಗೆ ವಿಫಲಗೊಳ್ಳುತ್ತಿವೆ ಎಂದು ಬೆಟ್ಟು ಮಾಡಿದ್ದರು.
ಸಿಸಿಟಿವಿಗಳ ವೈಫಲ್ಯ ಅಥವಾ ಸ್ಥಗಿತದ ಸಂಪೂರ್ಣ ಮತ್ತು ಘಟನಾವಾರು ವರದಿ, ಅವು ನಿಷ್ಕ್ರಿಯಗೊಂಡ ಅವಧಿಗಳಲ್ಲಿಯ ಸಂಪೂರ್ಣ ಕಣ್ಗಾವಲು ದೃಶ್ಯಾವಳಿಗಳು ಮತ್ತು ದಾಖಲೆಗಳು, ನೈಜ ಸಮಯದ ಮೇಲ್ವಿಚಾರಣೆಯ ತಕ್ಷಣ ಮರುಸ್ಥಾಪನೆ ಮತ್ತು ಅಧಿಕೃತ ಪ್ರತಿನಿಧಿಗಳಿಗೆ ನಿರಂತರ ಪ್ರವೇಶಾವಕಾಶಕ್ಕೆ ಪಾಂಜಾ ಆಗ್ರಹಿಸಿದ್ದಾರೆ.
'ಸಂಪೂರ್ಣ ಪಾರದರ್ಶಕತೆಯನ್ನು ತಕ್ಷಣವೇ ಖಚಿತಪಡಿಸದಿದ್ದರೆ ಪ್ರಜಾಸತ್ತಾತ್ಮಕ ತತ್ವಗಳಿಗೆ ಅನುಗುಣವಾಗಿ ಪ್ರತಿಭಟನೆಯನ್ನು ನಡೆಸುವುದು ನಮಗೆ ಅನಿವಾರ್ಯವಾಗಲಿದೆ' ಎಂದು ಪಾಂಜಾ ಎಚ್ಚರಿಕೆ ನೀಡಿದ್ದಾರೆ.
ಟಿಎಂಸಿ ನಾಯಕರು ಮತಪತ್ರಗಳ ನಿರ್ವಹಣೆಯನ್ನೂ ಪ್ರಶ್ನಿಸಿದ್ದಾರೆ.
ಚುನಾವಣಾಧಿಕಾರಿಗಳು ಆಡಳಿತ ಪಕ್ಷಕ್ಕೆ ತಿಳಿಸದೆ ರಾತ್ರಿ ವೇಳೆ ಮತಪತ್ರಗಳನ್ನು ಸಂಸ್ಕರಿಸಿ ವಿಂಗಡಿಸಿದ್ದಾರೆ. ಇದನ್ನು ಚುನಾವಣಾ ಅಧಿಕಾರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ. ಯಾರೂ ಗಮನಿಸದ ಸಮಯದಲ್ಲಿ, ಅಂದರೆ ರಾತ್ರಿಯ ವೇಳೆ ಇದನ್ನು ಏಕೆ ಮಾಡಲಾಗಿದೆ ಎಂದು ಟಿಎಂಸಿ ನಾಯಕ ತನ್ಮಯ ಘೋಷ್ ಪ್ರಶ್ನಿಸಿದರು.
ಈ ನಡುವೆ ಕಳವಳಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ಪ.ಬಂಗಾಳ ಸಿಇಒ ಮನೋಜ್ ಕುಮಾರ್ ಅಗರ್ವಾಲ್ ಅವರು, ಇವಿಎಂ ಭದ್ರತಾ ಕೊಠಡಿಗಳು 'ಸುರಕ್ಷಿತ ಮತ್ತು ಸುಭದ್ರ'ವಾಗಿವೆ, ಈ ಕುರಿತು ಯಾವುದೇ ವಿವಾದವಿಲ್ಲ ಎಂದು ಹೇಳಿದರು.

