ರಾಯ್ಪುರ್: ಜಷ್ಪುರ್ ಜಿಲ್ಲೆಯಲ್ಲಿ ಖಾಸಗಿ ವಿಮಾನವೊಂದು ಪತನವಾಗಿದೆ ಎಂಬ ವರದಿಗಳನ್ನು ಸೋಮವಾರ ಅಲ್ಲಗಳೆದಿರುವ ಛತ್ತೀಸ್ ಗಢ ಸರಕಾರ, ಅಂತಹ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಗುಡ್ಡಗಾಡಿನಲ್ಲಿ ವಿಮಾನ ಪತನದ ಸ್ಫೋಟವನ್ನು ಕೇಳಿರುವುದಾಗಿ ಸ್ಥಳೀಯರು ಯಾರೂ ವರದಿ ಮಾಡಿಲ್ಲ ಎಂದೂ ಅದು ಹೇಳಿದೆ.
ಜಷ್ಪುರ್-ನಾರಾಯಣ್ಪುರ್ ಪ್ರಾಂತ್ಯದಲ್ಲಿರುವ ಗುಡ್ಡಗಾಡಿನಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು, ಇಬ್ಬರು ಪೈಲಟ್ ಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ. ಆದರೆ, ವಿಮಾನ ಪತನವಾಗಿರುವ ಯಾವುದೇ ವರದಿಗಳು ಬಂದಿಲ್ಲ ಎಂದು ರಾಜ್ಯ ಸರಕಾರ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿವೆ.
ಘಟನಾ ಸ್ಥಳದಲ್ಲಿ ದಟ್ಟವಾದ ಹೊಗೆ ಕಂಡು ಬಂದಿತ್ತು. ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು, ವಿಮಾನ ಪತನದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ಜಷ್ಪುರ್ ಜಿಲ್ಲೆಯ ನಾರಾಯಣ್ ಪುರ್ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸುತ್ತಿದೆ ಎಂಬ ವರದಿಗಳು ಬಂದಿದ್ದವು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ರೋಹಿತ್ ವ್ಯಾಸ್ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೆಂದ್ ಸಿಂಗ್ ತಪಾಸಣೆ ನಡೆಸಿದರು ಎಂದು ಹೇಳಲಾಗಿದೆ.
ಈ ಕುರಿತು ಸ್ಥಳೀಯರಿಂದ ಮಾಹಿತಿಗಳನ್ನು ಪಡೆಯಲಾಯಿತು. ಯಾವ ಗ್ರಾಮಸ್ಥರೂ ಕೂಡ ಯಾವುದೇ ರೀತಿಯ ಸ್ಫೋಟದ ಸದ್ದು ಕೇಳಿಸಿತು ಎಂದು ಹೇಳಿಲ್ಲ ಹಾಗೂ ವಿಮಾನ ಪತನವಾಗಿರುವ ಬಗ್ಗೆ ಈವರೆಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ.
ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ತಂಡಗಳು ಡ್ರೋನ್ ಕ್ಯಾಮೆರಾ ಬಳಸಿಕೊಂಡು ಈ ಪ್ರದೇಶದ ಮೇಲೆ ನಿಗಾ ವಹಿಸಿವೆ. ಆದರೆ, ಜಿಲ್ಲಾಡಳಿತಕ್ಕೂ ವಿಮಾನ ಪತನದ ಯಾವುದೇ ಪುರಾವೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

