HEALTH TIPS

'ರಾಷ್ಟ್ರಪತ್ನಿ' ವಿವಾದ: ಕಾಂಗ್ರೆಸ್‌ ನಾಯಕ ಅಧೀರ್‌ಗೆ ಮಹಿಳಾ ಆಯೋಗದಿಂದ ನೋಟಿಸ್‌

 

           ನವದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು 'ರಾಷ್ಟ್ರಪತ್ನಿ' ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಗುರಿಯಾಗಿರುವಾಗಲೇ, ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ದಿಂದ ನೋಟಿಸ್‌ ಜಾರಿಯಾಗಿದೆ.

           ಖುದ್ದು ಹಾಜರಾಗುವಂತೆ ಮತ್ತು ತಮ್ಮ ಹೇಳಿಕೆಗಳಿಗೆ ಲಿಖಿತ ವಿವರಣೆಯನ್ನು ನೀಡುವಂತೆ ಎನ್‌ಸಿಡಬ್ಲ್ಯು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರಿಗೆ ನೋಟಿಸ್‌ ರವಾನಿಸಿದೆ.ವಿಚಾರಣೆಯನ್ನು ಆಗಸ್ಟ್ 3 ರಂದು ಬೆಳಿಗ್ಗೆ 11:30 ಕ್ಕೆ ನಿಗದಿಪಡಿಸಲಾಗಿದೆ.

                 ವಿವಾದದ ಹಿನ್ನೆಲೆಯಲ್ಲಿ ಅಧೀರ್ ರಂಜನ್ ಚೌಧರಿ ಹೇಳಿಕೆ ಬಿಡುಗಡೆ ಮಾಡಿದ್ದು, 'ನಾನು ರಾಷ್ಟ್ರಪತಿಯವರನ್ನು ಅವಮಾನಿಸುವ ಬಗ್ಗೆ ಆಲೋಚನೆಯನ್ನು ಸಹ ಮಾಡಿಲ್ಲ. ನನ್ನ ಭಾಷೆ ಬಂಗಾಳಿ. ನಾನು ಹಿಂದಿ ಅಷ್ಟಾಗಿ ಬಳಸುವುದಿಲ್ಲ. ತಪ್ಪಾಗಿದೆ. ರಾಷ್ಟ್ರಪತಿ ಅವರಿಗೆ ನೋವಾಗಿದ್ದರೆ, ವೈಯಕ್ತಿಕವಾಗಿ ಭೇಟಿಯಾಗಿ ಕ್ಷಮೆ ಕೇಳುತ್ತೇನೆ' ಎಂದು ತಿಳಿಸಿದ್ದಾರೆ.

              ಬಿಜೆಪಿಯು ಈ ವಿವಾದದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಎಳೆದು ತರುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಚೌಧರಿ, 'ಅವರು (ರಾಷ್ಟ್ರಪತಿ) ಬಯಸುವುದಾದರೆ, ನನ್ನನ್ನು ನೇಣಿಗೇರಿಸಲಿ. ನಾನು ಶಿಕ್ಷೆ ಅನುಭವಿಸಲು ಸಿದ್ಧ. ಆದರೆ, ಅವರನ್ನು (ಸೋನಿಯಾ ಗಾಂಧಿ) ಈ ವಿಚಾರದಲ್ಲಿ ಎಳೆದು ತರುತ್ತಿರುವುದು ಏಕೆ?' ಎಂದು ಪ್ರಶ್ನಿಸಿದ್ದಾರೆ.

                   ವಿವಾದದ ಹಿನ್ನೆಲೆಯಲ್ಲಿ ಸಂಸತ್‌ ಕಲಾಪವನ್ನು ಗುರುವಾರ ಮುಂದೂಡಲಾಯಿತು. ಸದನದಿಂದ ಹೊರ ನಡೆಯುತ್ತಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದರು. ಆಗ ಸೋನಿಯಾ ಗಾಂಧಿ ಅವರು ಹಿರಿಯ ಬಿಜೆಪಿ ಸಂಸದೆ ರಮಾದೇವಿ ಅವರ ಬಳಿಗೆ ತೆರಳಿ, ನನ್ನನ್ನು ಏಕೆ ಎಳೆದುತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು ಎಂದು ವರದಿಯಾಗಿದೆ.

         ಅಲ್ಲಿಯೇ ಇದ್ದ ಸಚಿವೆ ಸ್ಮೃತಿ ಇರಾನಿ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಸೋನಿಯಾ ಅವರು ತಮ್ಮೊಂದಿಗೆ ಮಾತನಾಡದಂತೆ ಅವರಿಗೆ ತಾಕೀತು ಮಾಡಿದರೆನ್ನಲಾಗಿದೆ. ನಂತರ, ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸದಸ್ಯರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

             ಘಟನೆಯ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಮ್ ರಮೇಶ್, 'ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇಂದು ಲೋಕಸಭೆಯಲ್ಲಿ ದೌರ್ಜನ್ಯ ನಡೆಸಿದ್ದಾರೆ. ಅತಿರೇಕವಾಗಿ ವರ್ತಿಸಿದ್ದಾರೆ. ಆದರೆ ಅವರನ್ನು ಸ್ಪೀಕರ್ ಪ್ರಶ್ನಿಸುತ್ತಾರೆಯೇ? ನಿಯಮಗಳು ವಿರೋಧ ಪಕ್ಷಗಳಿಗೆ ಮಾತ್ರವೇ?' ಎಂದು ಪ್ರಶ್ನೆ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries