ನವದೆಹಲಿ :ದೇಶಾದ್ಯಂತ ಬಹುತೇಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಸ್ಥಳೀಯ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಪ್ರತಿನಿಧಿಸುವವರ ಹಿಡಿತದಲ್ಲೇ ಇದೆ ಎಂಬ ಆತಂಕಕಾರಿ ಅಂಶ ಇದೀಗ ಬಹಿರಂಗಗೊಂಡಿದೆ ಎಂದು timesofindia.com ವರದಿ ಮಾಡಿದೆ.
ಎಸ್ಪಿಸಿಬಿ (SPCBs)ಗಳ ಶೇಕಡ 53 ರಷ್ಟು ಆಡಳಿತ ಮಂಡಳಿ ಸದಸ್ಯರು ಈ ವರ್ಗಗಳಿಂದ ಬಂದವರಾಗಿದ್ದು, ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಎಸ್ಪಿಸಿಬಿಗಳ ಸದಸ್ಯರ ಪೈಕಿ ಪರಿಸರ ಮಾಲಿನ್ಯವನ್ನು ವೈಜ್ಞಾನಿಕವಾಗಿ ನಿಯಂತ್ರಿಸಬೇಕಾದ ವಿಜ್ಞಾನಿಗಳು, ವೈದ್ಯರು ಮತ್ತು ಪರಿಸರ ಶಿಕ್ಷಣ ತಜ್ಞರ ಪ್ರಮಾಣ ಕೇವಲ ಶೇಕಡ 7ರಷ್ಟು ಮಾತ್ರ ಇದೆ ಎಂದು ದೆಹಲಿ ಮೂಲದ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (Centre for Policy Research-CPR) ತನ್ನ ವರದಿಯಲ್ಲಿ ಹೇಳಿದೆ. ಹತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಾಂಸ್ಥಿಕ ಸಂರಚನೆ ಮತ್ತು ಸಾಮರ್ಥ್ಯವನ್ನು ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ.
ಇಂಥ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ವಾಯು ಗುಣಮಟ್ಟ ನಿಯಂತ್ರಣದಲ್ಲಿ ಅನುಭವ ಇರುವವರು ಬೇಕು. ಆದರೆ ಯಾವ ಮಂಡಳಿಗಳಲ್ಲೂ ಇಂಥ ಅನುಭವಿಗಳು ಇಲ್ಲ. ಅಂತೆಯೇ ಪರಿಸರ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಗರಿಕ ಸಮಾಜ ಸದಸ್ಯರಿಗಾಗಲೀ, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸದಸ್ಯರಿಗಾಗಲೀ ಮಂಡಳಿಗಳಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ವರದಿ ವಿವರಿಸಿದೆ.
ಎಸ್ಪಿಸಿಬಿಗಳಿಗೆ ವಹಿಸಿದ ಹೊಣೆಗಾರಿಕೆಯನ್ನು ನಿಭಾಯಿಸಲು ಏಕೆ ಅವು ವಿಫಲವಾಗಿವೆ ಎಂಬ ಅಂಶದ ಬಗ್ಗೆ ಗಮನ ಹರಿಸಿರುವ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಆಧಾರದಲ್ಲಿ ಹಾಗೂ ಆಡಳಿತ ಮಂಡಳಿಯ ಮುಖಂಡರ ಜತೆ ಸರಣಿ ಸಂದರ್ಶನಗಳನ್ನು ನಡೆಸಿ ಮಾಹಿತಿ ಪಡೆದು ವಿಶ್ಲೇಷಿಸಲಾಗಿದೆ. ಇಂಥ ಮಂಡಳಿಗಳ ತಾಂತ್ರಿಕ ಹುದ್ದೆಗಳ ಪೈಕಿ ಶೇಕಡ 40ರಷ್ಟು ಖಾಲಿ ಇವೆ ಎಂದೂ ವರದಿ ಹೇಳಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.