ಕಾಸರಗೋಡು: ಕಾಸರಗೋಡು ಕನ್ನಡ ರಾಜ್ಯೋತ್ಸವದ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿರುವ ನ್ಯಾಯವಾದಿ ಕೆ ಶ್ರೀಕಾಂತ್ ಅವರಿಗೆ ಲಭಿಸಲಿದೆ. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಕೋಟೆಕಣಿ ಇವರ ನೇತೃತ್ವದಲ್ಲಿ ನವಂಬರ್ 3 ನೇ ತಾರೀಕಿನಂದು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನಗೈಯಲಿದ್ದಾರೆ.
ಸಾಂವಿಧಾನಿಕ ಹಕ್ಕಿನಿಂದ ವಂಚಿತರಾದ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ ಅವಕಾಶವನ್ನು ಪಡೆಯುವಲ್ಲಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳ ಶಿಕ್ಷಕರ ನೇಮಿಸುವ ಸಂದರ್ಭದಲ್ಲಿ ಕನ್ನಡಿಗರ ಪರ ಒಕ್ಕೊರಳಿನ ಧ್ವನಿಯಾಗಿ, ಯಾವುದೇ ಸವಲತ್ತುಗಳನ್ನು ನೀಡದೆ ಅವಗಣನೆಗೆ ತುತ್ತಾದ ಕನ್ನಡಿಗರ ಸಮರ ಹೋರಾಟಗಳಿಗೆ ಅಹೋರಾತ್ರಿಯಾದರೂ ಬೆಂಬಲವನ್ನು ನೀಡಿ, ಕನ್ನಡಿಗರ ಸಮರ ಹೋರಾಟಗಳಿಗೆ ಮುಂಚೂಣಿಯಲ್ಲಿದ್ದು, ಗಡಿನಾಡ ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ದೊರಕಬೇಕಾದ ಮೂಲಭೂತ ಸೌಕರ್ಯಗಳನ್ನು ದೊರಕಿಸಲು ಕೇಂದ್ರ,ರಾಜ್ಯ ಸರಕಾರಗಳಿಗೆ ಮನವಿ ಮಾಡಿದ, ಪೆರಿಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಆರಂಭಿಸುವಲ್ಲಿ ಸದಾ ಸರಕಾರವನ್ನು ಒತ್ತಾಯಿಸಿ ಆ ಕಾರ್ಯಗಳಲ್ಲಿ ಯಶಸ್ವಿಯನ್ನು ಪಡೆದು ಕನ್ನಡಿಗರ ಪರವಾಗಿ ಹಲವಾರು ಕೆಲಸ ಕಾರ್ಯಗಳನ್ನು ಮುಂಚೂಣಿಯಲ್ಲಿದ್ದು ನೆರವೇರಿಸಿದ್ದರಿದ ಬಿಜೆಪಿ ಜಿಲ್ಲಾಧ್ಯಕ್ಷರೂ, ಜಿಲ್ಲಾ ಪಂಚಾಯತ್ ಸದಸ್ಯರು ಆಗಿರುವ ನ್ಯಾಯವಾದಿ ಶ್ರೀ ಕಾಂತ್ ಅವರಿಗೆ ಈ ವರ್ಷದ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ದೊರಕಲಿದೆ.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.ಮಧ್ಯಾಹ್ನ2.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗನಟ, ಚಲನಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಬೈಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭಾ.ಜ.ಪ ಮಂಗಳೂರು ದಕ್ಷಿಣ ಕ್ಷೇತ್ರ ಸ್ಲಂಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಬೈಲ್ ಅಭ್ಯಾಗತರಾಗಿ ಭಾಗವಹಿಸುವರು. ಸಾಹಿತಿ ಅಕ್ಷತಾರಾಜ್ ಪೆರ್ಲ ರಾಜ್ಯೋತ್ಸವ ಉಪಾನ್ಯಾಸ ಮಾಡಲಿರುವರು.
ಕನ್ನಡ ಹೋರಾಟ ಸಮಿತಿ ಪ್ರಧಾನಕಾರ್ಯದರ್ಶಿ ಭಾಸ್ಕರ ಕೆ, ಉದ್ಯಮಿ ರಾಮಪ್ರಸಾದ್ ಶುಭಹಾರೈಸಲಿದ್ದಾರೆ. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ,ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಎಂ,ಸೌಮ್ಯ ಪ್ರಸಾದ್, ಲತಾ ಪ್ರಕಾಶ್ ,ಕಾವ್ಯ ,ಕುಶಲ ಮುಂತಾದವರು ಭಾಗವಹಿಸಲಿದ್ದಾರೆ.
ಬಳಿಕ ಕನ್ನಡ ನಾಡಗೀತೆ, ನೃತ್ಯ ವೈವಿಧ್ಯ, ಗಾಯನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವಕ್ಕೆ ಮೆರುಗು ನೀಡಲಿದೆ.