ಮಂಜೇಶ್ವರ : ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 150 ಕ್ಕೂ ಮಿಕ್ಕ ಕಳವು ಪ್ರಕರಣಗಳ ಕುಖ್ಯಾತ ಕಳ್ಳರನ್ನು ಸೆರೆ ಹಿಡಿಯಲಾಗಿದೆ.
ಗಡಿಪ್ರದೇಶವಾದ ತಲಪಾಡಿಯಲ್ಲಿ ಜೇಬು ಕಳ್ಳತನ ನಡೆಸಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಮಂಜೇಶ್ವರ ಎಸ್ಸೈ ನೇತೃತ್ವದ ಪೋಲೀಸರು ಒಬ್ಬನನ್ನು ಸೆರೆ ಹಿಡಿದಿದ್ದಾರೆ. ಮತ್ತೊಬ್ಬ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಪೋಲೀಸರು ನಡೆಸಿದ ಪರಿಶೋಧನೆಯಲ್ಲಿ ಇನ್ನೊಬ್ಬ ಆರೋಪಿಯನ್ನು ಕಾಞಂಗಾಡಿನಿಂದ ಬಂಧಿಸಲಾಗಿದೆ. ಬಸ್ಸಿನ ಪ್ರಯಾಣಿಕ ನಿಂದ 4200 ರೂ. ವನ್ನು ಕಳವು ಗೈಯಲಾಗಿತ್ತು.
ಕೋಝಿಕ್ಕೋಡ್ ನಿವಾಸಿಗಳಾದ ಪ್ರದೀಶ್ (32) ಹಾಗೂ ಸಜಿತ್ (43) ಬಂಧಿತ ಆರೋಪಿಗಳು. ಪ್ರದೀಶ್ ನ ವಿರುದ್ಧ ಕೇರಳದ ಬಾಲುಶ್ಚೇರಿ, ಕಲ್ಪಟ್ಟ, ಪೆರುವಣ್ಣ ಎಂಬೀ ಠಾಣಾ ವ್ಯಾಪ್ತಿಗಳಲ್ಲಿ 8 ಕ್ಕೂ ಮಿಕ್ಕ ಕಳವು ಪ್ರಕರಣಗಳಿವೆ. ಸಜಿತ್ ನ ವಿರುದ್ಧ ಕುಂಬಳೆ ಠಾಣೆಯಲ್ಲಿ ದೂರು ಇರುವುದಾಗಿ ಪೋಲೀಸರು ತಿಳಿಸಿದ್ದಾರೆ.
ಸೆರೆಗೀಡಾದ ಇಬ್ಬರೂ ಆರೋಪಿಗಳು ಕಳೆದ ಒಂದು ವರ್ಷದಿಂದ ಕಾಞಂಗಾಡಿನ ಲಾಡ್ಜ್ ನಲ್ಲಿ ತಂಗಿ ಕಳವು ನಡೆಸುತಿದ್ದರೆಂದು ಪೋಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಜೇಶ್ವರ ಎಸ್ಸೈ ಅನ್ಸಾರ್, ಅಡಿಷನಲ್ ಎಸ್ಸೈ ಗಳಾದ ಶರಪುದ್ದೀನ್, ಟೋನಿ, ಆರಿಫ್ ಹಾಗೂ ಚಾಲಕ ಪ್ರವೀಣ್ ಮೊದಲಾದವರು ತಂಡದಲ್ಲಿದ್ದರು.