ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರು, ಅಧಿಕಾರಿಗಳ ವಿರುದ್ಧ ಆರೋಪ ಮಾಡಿರುವುದರಿಂದ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ವರದಿಯ ಆರೋಪಗಳನ್ನು ಅಲ್ಲಗಳೆದ ವಿಜಯನ್, ಪ್ರಕರಣ ಬೆಂಗಳೂರಿಗೆ ವರ್ಗಾವಣೆಗೊಳ್ಳಲಿದೆ ಎಂದರು.
ವಿಜಯನ್ ಅವರ ಪ್ರತಿಕ್ರಿಯೆಗೆ ಕೆರಳಿದ ಪ್ರತಿಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದರು. 'ಸಿಬಿಐ ತನಿಖೆಗೆ ಏಕೆ ಹೆದರುತ್ತೀರಿ?' ಎಂದು ಕೇಳಿದರು. ಸ್ಪೀಕರ್ ಎಂ. ಬಿ. ರಾಜೇಶ್ ಅವರು ಸದನ ಮುಂದೂಡಿದರು.
ವಿವಿಧ ಕಾರಣ ಮುಂದಿಟ್ಟು ಪ್ರಕರಣವನ್ನು ರಾಜ್ಯದಿಂದ ವರ್ಗಾಯಿಸುವಂತೆ ಇ.ಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಸಲ್ಲಿಸಿದ ಸಲ್ಲಿಕೆಗೆ ವಿಜಯನ್ ಉತ್ತರಿಸುವ ವೇಳೆ ಕಾವೇರಿದ ಚರ್ಚೆ ನಡೆಯಿತು.