ಕಾಸರಗೋಡು: ಸಂಪೂರ್ಣ ದೃಷ್ಟಿ ಕಳೆದುಕೊಂಡ ಹಿನ್ನೆಲೆಯಲ್ಲಿ ವೇತನವಿಲ್ಲದೆ, ರಜೆಯಲ್ಲಿಕಳೆಯುತ್ತಿದ್ದ ಕೆ.ಟಿ.ಶಜಿತ್ ಕುಮಾರ್ ಎಂಬವರಿಗೆ ಸರ್ಕಾರ ಬದಲಿ ಕೆಲಸ ನೀಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದೆ. ಕಳೆದ ಮೂರು ವರ್ಷಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದ ಕೆ.ಟಿ.ಶಜಿತ್ ಕುಮಾರ್ ಅವರನ್ನು ಕಾಸರಗೋಡು ಕಲೆಕ್ಟರೇಟ್ ನಲ್ಲಿ ಟೆಲಿಫೆÇೀನ್ ಆಪರೇಟರ್ ಆಗಿ ಪಂಚಾಯತ್ ಉಪನಿರ್ದೇಶಕರ ಕಛೇರಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಸೂಪರ್ ನ್ಯೂಮರರಿ ಹುದ್ದೆಯ ಮೂಲಕ ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದ್ದು, ಇವರ ನಿವೃತ್ತಿಯ ನಂತರ ಈ ಹುದ್ದೆಯೂ ಇಲ್ಲದಾಗಲಿದೆ.
ಮಧೂರು, ಮಂಜೇಶ್ವರ ಗ್ರಾಮ ಪಂಚಾಯಿತಿಗಳಲ್ಲಿ ಶಜಿತ್ ಕುಮಾರ್ ಎಲ್ಡಿ ಕ್ಲಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಶರತ್ಕುಮಾರ್ ಅವರಿಗೆ ಸಂಪೂರ್ಣ ದೃಷ್ಟಿ ದೋಷ ಕಂಡುಬಂದಿತ್ತು. ಇದರಿಂದ ಕಂಪ್ಯೂಟರ್ ಫೈಲ್ ನೋಡಲಾಗದೆ ಅಂತಿಮವಾಗಿ ಕೆಲಸ ಬಿಡಬೇಕಾಗಿ ಬಂದಿತ್ತು. ಉದುಮ ಶಾಸಕ ಸಿ.ಎಚ್ ಕುಞಂಬು ಅವರ ವಿಶೇಷ ಪ್ರಯತ್ನದಿಂದ ಸ್ಥಳೀಯಾಡಳಿತ ಖಾತೆ ಸಚಿವ ಗೋವಿಂದನ್ ಮಾಸ್ಟರ್ ಅವರ ಮೂಲಕ ಸರ್ಕಾರಕ್ಕೆ ಒತ್ತಡ ಹೇರಿ, ಹೊಸ ಹುದ್ದೆಯೊಂದಿಗೆ ಕೆಲಸ ನೀಡಲಾಗಿದೆ. ಜೂನ್ 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಹೈಮಯೋಪಿಯ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಟಿ.ಶಜಿತ್ ಕುಮಾರ್ ಅವರಿಗೆ ದೃಷ್ಟಿದೋಷ ಕಂಡುಬಂದಿದ್ದು, ಏನೂ ಕಾಣಲಾಗದ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಅವರು ಬೇರೆ ಕೆಲಸಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ವಿಶೇಷಚೇತನರ ಹಕ್ಕುಗಳ ಕಾಯ್ದೆ, 2016ರ ಪ್ರಕಾರ, ಸೇವಾ ಸಮಯದಲ್ಲಿ ಅಂಗವೈಕಲ್ಯ ಉಂಟಾದಲ್ಲಿ ಅದು ಶ್ರೇಣಿಯಲ್ಲಿ ಹಿಂಬಡ್ತಿಗೆ ಕಾರಣವಾಗದು ಎಂಬ ವಿಶೇಷ ಕಾಯ್ದೆಯನ್ವಯ ಇವರನ್ನು ಸೂಪರ್ನ್ಯೂಮರರಿ ಹುದ್ದೆಯೊಂದಿಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ.