ಕಾಸರಗೋಡು: ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಯಾಗಿದ್ದು, ಇದರಲ್ಲಿ ಮಾದರಿ ವಸತಿ ಶಾಲೆಗಳು ಶಿಕ್ಷಣ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿರುವುದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದ ವರ್ಗಗಳ ಕಲ್ಯಾಣ, ಮುಜರಾಯಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಕರಿಂದಳ ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆ (ಸಿಬಿಎಸ್ಇ)ಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಆರೋಗ್ಯವನ್ನು ಖಾತರಿಪಡಿಸುವುದರ ಜತೆಗೆ ಅವರನ್ನು ಆರೋಗ್ಯವಂತ ಪೀಳಿಗೆಯಾಗಿ ಪರಿವರ್ತಿಸುವಲ್ಲಿ ಇಂತಹ ವಸತಿ ಶಾಲೆಗಳು ಸಹಕಾರಿಯಾಗಿದೆ ಎಂದು ತಿಳಿಸಿದರು. ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕರಿಂದಲಂ ಇಎಂಆರ್ಎಸ್ಎಸ್ ಪ್ರಾಂಶುಪಾಲ ಕೆ.ವಿ.ರವೀಂದ್ರನ್ ವರದಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಶಾಸಕ ಎಂ. ಕುಮಾರನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಮಡಿಕೈ ಗ್ರಾಪಂ ಅಧ್ಯಕ್ಷೆ ಎಸ್. ಪ್ರೀತಾ, ವಿವಿಧ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.