ಕಾಸರಗೋಡು: ಕಾಸರಗೋಡು(Kasaragod) ಜಿಲ್ಲೆಯ ಎಂಡೋಸಲ್ಫಾನ್(endosulfan) ಪೀಡಿತ ವ್ಯಕ್ತಿಗಳಿಗೆ ವಿಶೇಷ ಆರೋಗ್ಯ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ್ತಿ ದಯಾ ಬಾಯಿ ಈ ತಿಂಗಳ 8ರಿಂದ ರಾಜಧಾನಿ ತಿರುವನಂತಪುರದಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ವರದಿ ಮಾಡಿದೆ.
ಉಪವಾಸ ಸತ್ಯಾಗ್ರಹ ಆರಂಭಿಸಲಿರುವ ದಯಾ ಬಾಯಿ ಅವರ ವಯಸ್ಸು 82. "ನಮ್ಮ ಬೇಡಿಕೆ ವಿಶೇಷವಾದ್ದೇನೂ ಅಲ್ಲ. ಆರೋಗ್ಯ ಸೌಲಭ್ಯ ಜೀವನದ ಹಕ್ಕು. ಇದು ಮೂಲಭೂತ ಹಕ್ಕು" ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಸ್ತಾವಿತ ಜಾಗಗಳ ಪಟ್ಟಿಗೆ ಕಾಸರಗೋಡನ್ನು ಸೇರಿಸಬೇಕು, ಎಂಡೋಸಲ್ಫಾನ್ ಸಂತ್ರಸ್ತ ರೋಗಿಗಳಿಗೆ ವಿಶೇಷ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಹಾಗೂ ಎಂಡೋಸಲ್ಫಾನ್ ಸಂತ್ರಸ್ತರಿಗೆ ಆರೈಕೆ ಕೇಂದ್ರವನ್ನು ತೆರೆದು ಅವರ ಕುಟುಂಬದವರು ಕೆಲಸಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕು ಎಂಬ ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗೆ ದಯಾಬಾಯಿ ಮುಂದಾಗಿದ್ದಾರೆ.
ಯಾವ ಮಾನದಂಡದಿಂದ ನೋಡಿದರೂ ಕೇರಳ ಎಐಐಎಂಎಸ್ ಕಾಸರಗೋಡು ಜಿಲ್ಲೆಗೆ ದಕ್ಕಬೇಕು. ಏಕೆಂದರೆ ಕೇರಳದಲ್ಲಿ ತೃತೀಯ ಹಂತದ ಚಿಕಿತ್ಸಾ ವ್ಯವಸ್ಥೆ ಇಲ್ಲದ ಏಕೈಕ ಜಿಲ್ಲೆ ಇದು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ, ಇಲ್ಲಿನ ರೋಗಿಗಳನ್ನು ಮಂಗಳೂರಿಗೆ ಕರೆದೊಯ್ಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕನಿಷ್ಠ 20 ಮಂದಿ ಆ ಸಂದರ್ಭದಲ್ಲಿ ಜೀವ ಕಳೆದುಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಬಹುದಾದ ಯಾವುದೇ ಸ್ಪೆಷಾಲಿಟಿ ಆಸ್ಪತ್ರೆ ಕಾಸರಗೋಡಿನಲ್ಲಿ ಇಲ್ಲ ಎಂದು ಅವರು ವಿವರಿಸಿದ್ದಾರೆ.
ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಕೂಡಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿ, ಕ್ಯಾನ್ಸರ್ ರೋಗಿಗಳ ಉಚಿತ ಚಿಕಿತ್ಸೆಗೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ. ಆದರೆ ನಮ್ಮ ಸರ್ಕಾರ ಇದನ್ನು ನೀಡಲು ವಿಫಲವಾಗಿದೆ ಎಂದು ದಯಾಬಾಯಿ ಆಪಾದಿಸಿದ್ದಾರೆ.