ನವದೆಹಲಿ: ಹಿಂದೂ ಮಹಾಸಾಗರದಲ್ಲಿ ನಿರಂತರವಾಗಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುವುದಕ್ಕಾಗಿ ಚೀನಾವು ಕಡಲ್ಗಳ್ಳರ ವಿರುದ್ಧದ ಕಾರ್ಯಾಚರಣೆಯನ್ನು ನೆವವಾಗಿ ಬಳಸಿಕೊಂಡಿದೆ ಎಂದು ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಬುಧವಾರ ಹೇಳಿದ್ದಾರೆ.
ಚೀನಾವು 2008ರಿಂದ ತನ್ನ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಯಡಿಯಲ್ಲಿ ಹಿಂದೂ ಮಹಾ ಸಾಗರದಲ್ಲಿ 120 ಯುದ್ಧ ನೌಕೆಗಳನ್ನು ನಿಯೋಜಿಸಿದೆ ಎಂದು ಮನೋಹರ್ ಪಾರಿಕ್ಕರ್ ರಕ್ಷಣಾ ಅಧ್ಯಯನಗಳು ಮತ್ತು ವಿಶ್ಲೇಷಣೆಗಳ ಸಂಸ್ಥೆ ತಿಳಿಸಿದೆ. 2015ರಲ್ಲಿ, ಚೀನಾವು ಕಡಲ್ಗಳ್ಳ ನಿಗ್ರಹ ಕಾರ್ಯಾಚರಣೆಗಾಗಿ ಏಡನ್ ಕೊಲ್ಲಿಯಲ್ಲೂ ಪರಮಾಣು ಶಕ್ತ ಸಬ್ಮರೀನೊಂದನ್ನು ನಿಯೋಜಿಸಿದೆ ಎಂದು ಅದು ಹೇಳಿದೆ.
ಪರಮಾಣು ಶಕ್ತ ಸಬ್ಮರೀನ್ಗಳು ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳಿಗೆ ಸೂಕ್ತವಾಗಿಲ್ಲ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ''ಹಿಂದೂ ಮಹಾ ಸಾಗರದಲ್ಲಿ, ಯಾವುದೇ ಸಮಯದಲ್ಲಿ 5ರಿಂದ 8 ಚೀನೀ ನೌಕಾ ಪಡೆಯ ಘಟಕಗಳು ಕಾರ್ಯಾಚರಿಸುತ್ತಿವೆ. ಅವು ಯುದ್ಧ ನೌಕೆಗಳು ಮತ್ತು ಸಂಶೋಧನಾ ಹಡಗುಗಳಾಗಿರಬಹುದು ಅಥವಾ ಚೀನಾದ ಮೀನುಗಾರಿಕಾ ಹಡಗುಗಳಾಗಿರಬಹುದು'' ಎಂದು ಅಡ್ಮಿರಲ್ ಹರಿ ಕುಮಾರ್ ಹೇಳಿದರು. ''ನಾವು ಅವುಗಳ ಮೇಲೆ ನಿಗಾ ಇಟ್ಟಿದ್ದೇವೆ ಹಾಗೂ ಹಿಂದೂ ಮಹಾ ಸಾಗರ ವಲಯದಲ್ಲಿ ಅವುಗಳು ತಮ್ಮ ಚಟುವಟಿಕೆಗಳನ್ನು ಹೇಗೆ ನಡೆಸುತ್ತಿವೆ ಎನ್ನುವುದನ್ನು ನೋಡುತ್ತಿದ್ದೇವೆ'' ಎಂದರು.
ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ 49ನೇ ವಾರ್ಷಿಕ ಸಮ್ಮೇಳನದಲ್ಲಿ, ಭಾರತ ಎದುರಿಸುತ್ತಿರುವ ಭದ್ರತಾ ಸವಾಲುಗಳು ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು.
ಕಳೆದ ತಿಂಗಳು, ಚೀನಾದ ಯುದ್ಧ ನೌಕೆಯೊಂದು ಶ್ರೀಲಂಕಾದ ಹಂಬನ್ಟೋಟ ಬಂದರಿಗೆ ಬಂತು. ತನ್ನ ಸೇನಾ ಸಂಸ್ಥಾಪನೆಗಳ ಮೇಲೆ ಬೇಹುಗಾರಿಕೆ ನಡೆಸಬಹುದು ಎಂಬ ಕಳವಳವನ್ನು ಭಾರತ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಯುವಾನ್ ವಾಂಗ್ 5 ಎಂಬ ನೌಕೆಯು ಚೀನಾ ನಿರ್ಮಿತ ಹಾಗೂ ಅದರದೇ ಅಧೀನದಲ್ಲಿರುವ ಹಂಬನ್ಟೋಟ ಬಂದರಿನಲ್ಲಿ ಲಂಗರು ಹಾಕಿತು. ಅದು ಸಂಶೋಧನಾ ಮತ್ತು ಸಮೀಕ್ಷಾ ನೌಕೆ ಎಂಬುದಾಗಿ ಚೀನಾ ಹೇಳಿದರೂ, ಅದು ಉಭಯ ಬಳಕೆಯ ಬೇಹುಗಾರಿಕಾ ನೌಕೆಯಾಗಿದೆ ಎಂಬುದಾಗಿ ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.
''ಚೀನಾ ಈಗ ಡಿಜಿಬೌಟಿಯಲ್ಲಿ ನೆಲೆ ಹೊಂದಿದೆ. ಈಗ ಹಿಂದೂ ಮಹಾ ಸಾಗರ ವಲಯ, ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ ಮತ್ತು ಇತರ ಹಲವಾರು ದೇಶಗಳಲ್ಲಿ ವಿವಿಧ ಬಂದರುಗಳನ್ನು ಅಭಿವೃದ್ಧಿಪಡಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ'' ಎಂದು ಭಾರತೀಯ ನೌಕಾ ಪಡೆ ಮುಖ್ಯಸ್ಥರು ಹೇಳಿದರು.