ಕಾಸರಗೋಡು: ಜಿಲ್ಲೆಯಲ್ಲಿ ಕೃಷಿಕರ ಆಸ್ತಿಪಾಸ್ತಿ, ಜೀವಹಾನಿಗೆ ಕಾಖರಣವಾಗುತ್ತಿರುವ ಕಾಡಾನೆಗಳನ್ನು ದೂರದ ಅರಣ್ಯಗಳಿಗೆ ಓಡಿಸಲು ವಿಶೇಷ ಮಿಷನ್ ತಂಡವು ಕಾರಡ್ಕ ಬ್ಲಾಕ್ ಪಂಚಾಯಿತಿಯ ವಸತಿ ಪ್ರದೇಶವನ್ನು ತಲುಪಿದೆ. ಕಣ್ಣೂರು ವಿಭಾಗದ ವ್ಯಾಪ್ತಿಯ ತಂಡ ಗುರುವಾರ ಮಧ್ಯಾಹ್ನ ಆಗಮಿಸಿತು. ಕಾರ್ಯಪಡೆಯ ಕಾರ್ಯವು ಅರಣ್ಯ ಇಲಾಖೆಯ ಕಣ್ಣೂರು ಉತ್ತರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೇಲ್ನೋಟದಲ್ಲಿ ಕಾರ್ಯಾಚರಿಸಲಿದೆ. ವಲಯ ಅರಣ್ಯಾಧಿಕಾರಿ ಕೆ.ಆರ್.ವಿಜಯನಾಥ್, ಬೀಟ್ಅರಣ್ಯಾಧಿಕಾರಿ ಎಂ.ಜಿತಿನ್ ಹಾಗೂ ಎನ್ಎಂಆರ್ ನೌಕರರಾದ ಅನೂಪ್, ಮೆಲ್ಜೊ, ರಾಜೇಂದ್ರನ್ ತಂಡದಲ್ಲಿದ್ದಾರೆ. ಇವರಲ್ಲದೆ ಕಾಸರಗೋಡು ಫ್ಲೈಯಿಂಗ್ ಸ್ಕ್ವಾಡ್, ವಿಭಾಗ ಸಿಬ್ಬಂದಿ, ಕಣ್ಣೂರು, ಕಾಸರಗೋಡು ಆರ್.ಆರ್. ಟಿ. ನೌಕರರನ್ನು ಒಳಗೊಂಡಂತೆ ಕಾರ್ಯಪಡೆಯನ್ನು ಸಿದ್ಧಪಡಿಸಲಾಗುವುದು.
ಕಾಡಾನೆ ಹಾವಳಿಯಿಂದ ಜನಜೀವನ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಖ್ಯಸ್ಥ ಬೆನ್ನಿಚಾನ್ ಥಾಮಸ್ ಅವರನ್ನು ಇತ್ತೀಚೆಗೆ ಭೇಟಿಮಾಡಿದ ಶಾಸಕ ಸಿ.ಎಚ್. ಕುಞಂಬು ಚರ್ಚಿಸಿದ ಬಳಿಕ ವಿಶೇಷ ಪಡೆ ರಚಿಸಲು ನಿರ್ಧರಿಸಲಾಗಿದೆ.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅವರು ಕ್ಷೇತ್ರದ ಪರಿಸ್ಥಿತಿಯನ್ನು ಮಿಷನ್ ಸಿಬ್ಬಂದಿಗೆ ವಿವರಿಸಿದರು. ಡಿಎಫ್ಒ ಪಿ.ಬಿಜು, ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ ಒ ಪಿ.ಧನೇಶ್ ಕುಮಾರ್, ಕಾಸರಗೋಡು ಅರಣ್ಯ ರಕ್ಷಕ ಟಿ.ಜಿ.ಸೊಲೊಮನ್ ಉಪಸ್ಥಿತರಿದ್ದರು. ಕಾಸರಗೋಡು ವ್ಯಾಪ್ತಿಗೆ ಒಳಪಡುವ ಮುಳಿಯಾರ್, ದೇಲಂಪಾಡಿ, ಬೇಡಕಂ, ಕುತ್ತಿಕೋಲ್, ಕಾರಡ್ಕ ಪಂಚಾಯಿತಿಗಳಲ್ಲಿ ಕಾಡಾನೆಗಳು ವ್ಯಾಪಕವಾಗಿ ಬೆಳೆ ನಾಶಪಡಿಸಿದ್ದು, ನೀರಾವರಿ ವ್ಯವಸ್ಥೆ, ವಾಹನಗಳು, ಮನೆ, ವಿದ್ಯುತ್ ಕಂಬಗಳನ್ನು ಹಾನಿಗೊಳಿಸಿವೆ. ಜನವಸತಿ ಪ್ರದೇಶದಲ್ಲಿ ಸುಮಾರು 12 ಕಾಡಾನೆಗಳಿದ್ದು, ಜನರ ಜೀವಕ್ಕೆ ಅಪಾಯ ಎದುರಾಗಿದೆ. ಕಾಡಿನಿಂದ ಜನವಾಸ ಪ್ರದೇಶಕ್ಕೆ ಲಗ್ಗೆಯಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸಲಾಗದಿರುವುದರಿಂದ ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಸೋಲಾರ್ ತೂಗು ಬೇಲಿ ನಿರ್ಮಾಣ ಯೋಜನೆಯನ್ನೂ ಪೂರ್ತಿಗೊಳಿಸಲು ಸಾಧ್ಯವಾಗದೆ ಕಾಮಗಾರಿ ಅರ್ಧಕ್ಕೆ ಬಾಕಿಉಳಿಯುವಂತಾಗಿದೆ.
ಕಾಡಾನೆಗಳನ್ನು ಓಡಿಸಲು ವಿಶೇಷ ಕಾರ್ಯಪಡೆ ಜಿಲ್ಲೆಗೆ ಆಗಮನ
0
September 16, 2022
Tags