ಬದಿಯಡ್ಕ: ಮಾದಕ ವ್ಯಸನದ ಪರಿಣಾಮವು ನಮ್ಮ ಮನಸಿನ ಮೇಲೆ ಧೀರ್ಘ ಕಾಲ ಉಳಿಯುವಂತದ್ದು. ಅದರ ಕಡೆಗಿನ ಆಕರ್ಷಣೆ ಮನುಷ್ಯನ ಆಲೋಚನೆಯನ್ನು ಕೆಟ್ಟದರತ್ತ ಸೆಳೆಯುತ್ತದೆ. ಸಮಾಜದ ರೀತಿ ನೀತಿಗಳಿಗೆ ಎದುರಾಗಿ ಬದುಕಿದಾಗ ಸ್ಥಾನ ಮಾನಗಳ ಮೇಲೆ ಧಕ್ಕೆ ಉಂಟಾಗುತ್ತದೆ ಎಂದು ಬದಿಯಡ್ಕ ಠಾಣೆಯ ಎಸ್ ಐ ವಿನೋದ್ ಕುಮಾರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕಾಸರಗೋಡು, ಸೌಪರ್ಣಿಕ ನವಜೀವನ ಸಮಿತಿ ಬದಿಯಡ್ಕ ಮತ್ತು ಹಲವು ನವಜೀವನ ಸಮಿತಿಗಳ ನೇತೃತ್ವದಲ್ಲಿ ಪೆರಡಾಲ ಕ್ಷೇತ್ರದ ಉದನೇಶ್ವರ ಸಭಾಭವನದಲ್ಲಿ ನಡೆಯುತ್ತಿರುವ 1584ನೇ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನಡೆದ ಗುಂಪು ಸಲಹೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೆಲ ಕ್ಷಣಗಳ ಆನಂದಕ್ಕೆ ನಮ್ಮ ಸುಂದರ ನಾಳೆಗಳು ಬಲಿಯಾಗುತ್ತವೆ. ಆ ಮೂಲಕ ಜೀವನ ದಾರಿತಪ್ಪುತ್ತದೆ. ಆದುದರಿಂದ ಇಂತಹ ಶಿಬಿರಗಳ ಮೂಲಕ ಹೊಸ ಬದುಕು ಕಟ್ಟಿಕೊಂಡು ಮುಂದೆ ಬರುವ ಸಮಸ್ಯೆಗಳಿಗೆ ಈಗಲೇ ತಡೆ ಹಾಕಬೇಕು. ಮಾತ್ರವಲ್ಲದೆ ಯುವ ಸಮೂಹ ಇಂತಹ ಆಕರ್ಷಣೆಗೆ ಒಳಗಾದಾಗ ಅವರನ್ನು ಸಕಾಲದಲ್ಲಿ ಎಚ್ಚರಿಸುವತ್ತಲೂ ಗಮನ ಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಗೋಸಾಡ, ಬಿ.ಪಿ.ಶೇಣಿ, ರಾಮಚಂದ್ರ, ಶರೀಫ್ ಕೊಡವಂಜಿ, ಮಲ್ಲೇಶ್ ಬೆಟ್ಟಂಪಾಡಿ, ಹರೀಶ್ ಮಾಡ ಮುಂತಾದವರು ಉಪಸ್ಥಿತರಿದ್ದರು.
ಕ್ಷಣ ಸುಖದ ವ್ಯಸನಬಲಿ ಬದುಕನ್ನು ದಿಕ್ಕೆಡಿಸುತ್ತದೆ: ಠಾಣಾಧಿಕಾರಿ ವಿನೋದ್ ಕುಮಾರ್
0
September 15, 2022