HEALTH TIPS

ಚುನಾವಣಾ ಇಲಾಖೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ನೀಡಿದ ಉತ್ತರಕ್ಕೂ ಬೆಲೆ ಇಲ್ಲ- ಕನ್ನಡದಲ್ಲಿ ಮತದಾರ ಚೀಟಿ, ಪಟ್ಟಿ, ನೋಟೀಸು, ಸೂಚನೆ ಯಾವುದೂ ಇಲ್ಲ

 
     ಮುಳ್ಳೇರಿಯ: ಭಾರತೀಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವಾದ ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಯಮ ಪ್ರಕಾರ ಕನ್ನಡದಲ್ಲೂ ಮತದಾರ ಚೀಟಿ, ಮತದಾರ ಪಟ್ಟಿ, ಉಮೇದ್ವಾರರ ವಿವರಣೆಯಿರುವ ನೋಟೀಸು, ಮತದಾರರಿಗೆ ಸೂಚನೆಗಳು ಮೊದಲಾದವುಗಳನ್ನು ವಿತರಿಸಲಾಗುವುದು ಮತ್ತು ಪ್ರದರ್ಶಿಸಲಾಗುವುದು ಎಂದು ರಾಜ್ಯ ಚುನಾವಣಾ ಇಲಾಖೆ ಮಾಹಿತಿ ಹಕ್ಕು ಪ್ರಕಾರ ಉತ್ತರ ನೀಡಿದ್ದರೂ ಜಿಲ್ಲಾ ಚುನಾವಣಾಧಿಕಾರಿಗಳು ಅದನ್ನು ಅನುಷ್ಠಾನಗೊಳಿಸದಿರುವುದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ.
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಲ್ಲಿ ಕನ್ನಡದಲ್ಲೂ ಮತದಾರ ಪಟ್ಟಿ, ಚೀಟಿ, ಭಿತ್ತಿಪತ್ರಗಳನ್ನು ಒದಗಿಸಬೇಕೆಂದು ಕನ್ನಡಿಗರು ರಾಜ್ಯ ಚುನಾವಣಾ ಆಯೋಗಕ್ಕೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಯವರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ನೀಡಿದ್ದರು. ಮಾತ್ರವಲ್ಲ, ಕನ್ನಡದಲ್ಲಿ ಮಾಹಿತಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣಾ ಇಲಾಖೆಗೆ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಪ್ರಶ್ನೆಯನ್ನೂ ಕೇಳಲಾಗಿತ್ತು. ಮುಳ್ಳೇರಿಯಾದ ಕೆ.ಎಂ.ಗೋಪಾಲಕೃಷ್ಣ ಭಟ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಚುನಾವಣಾ ಇಲಾಖೆಯ ಅಧಿಕಾರಿಗಳು ಕಾಸರಗೋಡು, ಮಂಜೇಶ್ವರಗಳಲ್ಲಿ ಕನ್ನಡದಲ್ಲೂ ಮಾಹಿತಿ ನೀಡಬೇಕೆಂದು ಭಾರತೀಯ ಚುನಾವಣಾ ಆಯೋಗದ ಸೂಚನೆಯಿದೆಯೆಂದೂ ಆ ಮೇರೆಗೆ ಕನ್ನಡದಲ್ಲೂ ಮತದಾರಪಟ್ಟಿ, ಮತದಾರ ಚೀಟಿ, ನೋಟೀಸು ಮೊದಲಾದವುಗಳನ್ನು ವಿತರಿಸಲಾಗುವುದು ಹಾಗೂ ಪ್ರದರ್ಶಿಸಲಾಗುವುದು ಎಂದು ಉತ್ತರಿಸಿದ್ದರು. ಆದರೆ ಕಾಸರಗೋಡು, ಮಂಜೇಶ್ವರದ ಮತದಾರರಿಗೆ ಕನ್ನಡದಲ್ಲಿ ಮತದಾರ ಚೀಟಿ, ಮತದಾರ ಪಟ್ಟಿ ಸೂಚನೆಗಳು ಯಾವುದನ್ನೂ ವಿತರಿಸಲಾಗಿಲ್ಲ. ಮತಗಟ್ಟೆಗಳ ಹೊರಗೆ ಪ್ರದರ್ಶಿಸಿದ ಸೂಚನಾಫಲಕಗಳು, ಭಿತ್ತಿಪತ್ರಗಳು ಮಾತ್ರವಲ್ಲ ಫಾರ್ಮ್ ಹದಿನೈದರಲ್ಲಿ ಪ್ರದರ್ಶಿಸಲಾದ ಉಮೇದ್ವಾರರ ವಿವರಗಳೂ ಮಲಯಾಳ ಮತ್ತು ಇಂಗ್ಲೀಷಿನಲ್ಲಿ ಮಾತ್ರವೇ ಇದ್ದುದರಿಂದ ಕನ್ನಡ ಮಾತ್ರ ಅರಿತ ಸಾಮಾನ್ಯ ಕನ್ನಡಿಗ  ಮತದಾರರು ಸಂಕಷ್ಟಕ್ಕೊಳಗಾದರು.
     ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೆಲವು ಮಂದಿ ನೌಕರರ ಕನ್ನಡ ವಿರೋಧಿ ರಾಜಕೀಯ ಧೋರಣೆಗಳು ಈ ನಿರ್ಲಕ್ಷ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಲ್ಲಿ ಕನ್ನಡದಲ್ಲಿ ಯಾವುದೇ ಮಾಹಿತಿಗಳನ್ನು ನೀಡದೆ ಮತದಾನವನ್ನು ನಿರುತ್ತೇಜಿಸುವ ಮೂಲಕ ಇಲ್ಲಿ ಬಲಿಷ್ಠವಲ್ಲದ ರಾಜಕೀಯ ಪಕ್ಷವೊಂದಕ್ಕೆ ಅನುಕೂಲ ಮಾಡಿಕೊಡುವ ತಂತ್ರವನ್ನು ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನು ಸಮರ್ಥಿಸುವಂತೆ ಕನ್ನಡಿಗ ಮತದಾರರಲ್ಲಿ ಹಲವರು ಸರಿಯಾದ ಮಾಹಿತಿ ದೊರೆಯದೆ ಮಾರ್ಗದರ್ಶನವಿಲ್ಲದೆ ಮತ ಚಲಾಯಿಸದೆ ಮರಳಿದರು. ಇದರಿಂದ ಮತಚಲಾವಣೆಯ ಪ್ರಮಾಣ ಕಡಿಮೆಯಾಯಿತೆನ್ನಲಾಗಿದೆ.
   ಕನ್ನಡದಲ್ಲಿ ಮತದಾರ ಚೀಟಿ ಹಾಗೂ ಮತದಾರ ಪಟ್ಟಿ ಒದಗಿಸಬೇಕೆಂದು ಪ್ರಮುಖ ರಾಜಕೀಯ ಪಕ್ಷಗಳಾದ ಮುಸ್ಲಿಂಲೀಗ್ ಮತ್ತು ಬಿ.ಜೆ.ಪಿ. ಒತ್ತಾಯಿಸಿದ್ದರೂ ಅವರ ಮನವಿಗಳನ್ನು ಜಿಲ್ಲಾಡಳಿತ ನಿರ್ಲಕ್ಷಿಸಿದ್ದರ ಹಿಂದೆ ರಾಜಕೀಯ ಪ್ರೇರಣೆಯಿದೆ ಎನ್ನಲಾಗುತ್ತಿದೆ. ಚುನಾವಣಾ ಆಯೋಗದ ಜಾಲತಾಣದಲ್ಲೂ  ಮತದಾರ ಪಟ್ಟಿಯನ್ನು ಕನ್ನಡದಲ್ಲಿ ಮುದ್ರಿಸಿರಲಿಲ್ಲ. ಕನ್ನಡ ತಿಳಿದ ನೌಕರರನ್ನು ಮಲಯಾಳ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದರೆ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಅಧಿಕಾರಿಗಳಲ್ಲಿ ಹಲವರಿಗೆ ಕನ್ನಡದ ಗಂಧಗಾಳಿಯಿರಲಿಲ್ಲ. ಮಾತ್ರವಲ್ಲ ಕನ್ನಡ ಪ್ರದೇಶದಲ್ಲಿ ನಿಯುಕ್ತರಾದ ಚುನಾವಣಾಧಿಕಾರಿಗಳು ಹಾಗೂ ನೌಕರರು ಉದ್ದೇಶಪೂರ್ವಕ ವಿಳಂಬನೀತಿ ಅನುಸರಿಸಿ ಮತದಾರರನ್ನು ನಿರುತ್ತೇಜಿಸುತ್ತಿದ್ದರು ಎಂಬ ಆರೋಪವೂ ಈ ಬಾರಿ ಕೇಳಿಬಂದಿದೆ. ಕನ್ನಡ ಭಾಷೆ ಹಾಗೂ ಕನ್ನಡ ಮತದಾರರ ಬಗೆಗಿನ ಇಂತಹ ನಿರ್ಲಕ್ಷ್ಯ ಧೋರಣೆಯನ್ನು  ಯಾವುದೇ ರಾಜಕೀಯ ಪಕ್ಷದ ನಾಯಕರಾಗಲೀ ಕಾರ್ಯಕರ್ತರಾಗಲೀ ಪ್ರತಿಭಟಿಸದಿರುವುದು ಕೂಡ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries