ಕೊಯಮತ್ತೂರು: ಜಂಟಿ ಚೀಫ್ಸ್ ಆಫ್ ಸ್ಟಾಫ್ ಬಿಪಿನ್ ರಾವತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಕೇರಳದ ಯೂಟ್ಯೂಬ್ ಚಾನೆಲ್ ವೊಂದರ ವಿರುದ್ಧ ಸುಳ್ಳು ಸುದ್ದಿ ನೀಡಿದ್ದಕ್ಕಾಗಿ ದೂರು ದಾಖಲಾಗಿದೆ. ಕೊಯಮತ್ತೂರಿನ ಖಾಸಗಿ ಕಾಲೇಜು ಯೂಟ್ಯೂಬ್ ಚಾನೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೆಲಿಕಾಪ್ಟರ್ ಪತನದ ನಂತರ, ಕೊಯಮತ್ತೂರು ಮತ್ತು ಹತ್ತಿರದ ಪ್ರದೇಶಗಳ ವಿದ್ಯಾರ್ಥಿಗಳು ದೊಡ್ಡ ವಿಜಯೋತ್ಸವ ಮತ್ತು ಡಿಜೆ ಪಾರ್ಟಿ ಮಾಡಿದ್ದಾರೆ ಎಂದು ವರದಿ ಮಾಡಲಾಗಿತ್ತು. ಜಂಟಿ ಚೀಫ್ಸ್ ಆಫ್ ಸ್ಟಾಫ್ ಬಿಪಿನ್ ರಾವತ್ ಅವರ ಸಾವನ್ನು ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ ಎಂದು ವರದಿ ತಿಳಿಸಿತ್ತು. ಹೆಲಿಕಾಪ್ಟರ್ ಅಪಘಾತದ ಮರುದಿನ ಡಿಸೆಂಬರ್ 9 ರಂದು ಸಂಭ್ರಮಾಚರಣೆ ನಡೆದಿತ್ತು.
ಆದರೆ ಯೂಟ್ಯೂಬ್ ಚಾನೆಲ್ ಸುದ್ದಿಯಲ್ಲಿ ಹೇಳುತ್ತಿರುವುದು ಸುಳ್ಳು ಎಂದು ಕೊಯಮತ್ತೂರಿನ ಕಾಲೇಜು ವಾದಿಸಿದೆ. ಡಿ.7ರಂದು ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಚರಿಸಿದ ದೃಶ್ಯಗಳಿವು. ಹರಡಿರುವುದು ಸುಳ್ಳು ಸುದ್ದಿ ಎಂದು ಆಡಳಿತ ಮಂಡಳಿ ಹೇಳಿದೆ. ಇಂತಹ ಸುಳ್ಳು ಸುದ್ದಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಬಿಪಿನ್ ರಾವತ್ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದರು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬೆಂಗಳೂರಿನಲ್ಲಿ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಫೇಸ್ ಬುಕ್ ಖಾತೆ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜನರಲ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಡಿಸೆಂಬರ್ 8ರಂದು ಪತನಗೊಂಡಿತ್ತು. ಘಟನೆಯಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್ನಲ್ಲಿ 14 ಮಂದಿ ಇದ್ದರು. ಊಟಿ ಕುನ್ನೂರು ಬಳಿ ಅಪಘಾತ ಸಂಭವಿಸಿದೆ. ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಐ-17ವಿ5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.