ಬದಿಯಡ್ಕ: ಜಿಲ್ಲೆಯ ಕುಂಬ್ಡಾಜೆ ಕಜಮಲೆ ನಿವಾಸಿ, ಉದಯ-ಸವಿತಾ ದಂಪತಿ ಪುತ್ರಿ ಏಳು ವರ್ಷದ ಬಾಲಕಿ ಸಾನ್ವಿಯ ಆರೋಗ್ಯಕ್ಕಾಗಿ ನಾಡಿನ ಜನತೆ ನಡೆಸುತ್ತಿರುವ ಪ್ರಾರ್ಥನೆ ಸಾಕಾರಗೊಳ್ಳುವ ದಿನ ಸಮೀಪಿಸುತ್ತಿದೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಡೆಸುವ ನಿಟ್ಟಿನಲ್ಲಿ ಜುಲೈ 24ರಂದು ಸಾನ್ವಿ ಪ್ರಯಾಣ ಬೆಳೆಸಲಿದ್ದಾಳೆ ಎಂದು ಸಾನ್ವಿ ವೈದ್ಯಕೀಯ ಚಿಕಿತ್ಸಾ ಸಮಿತಿ ರಕ್ಷಾಧಿಕಾರಿ ಆನಂದ ಕೆ. ಮವ್ವಾರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜು. 25ರಂದು ಆಸ್ಪತ್ರೆಗೆ ದಾಖಲಾಗುವ ಸಾನ್ವಿಗೆ ಆರು ತಿಂಗಳ ನಿರಂತರ ಚಿಕಿತ್ಸೆ ನಡೆಯಲಿದೆ. ಈಕೆ ಸಹೋದರಿ 12 ವರ್ಷ ಪ್ರಾಯದ ತನುಜಶ್ರೀ ಅಸ್ಥಿಮಜ್ಜೆ ದಾನಿಯಾಗಿದ್ದು, ಇಬ್ಬರು ಪುತ್ರಿಯರ ಜತೆ ತಂದೆ, ತಾಯಿ ಇರಲಿದ್ದಾರೆ. ಸಾನ್ವಿ ಚಿಕಿತ್ಸೆಗಾಗಿ ವೈದ್ಯರು ಸುಮಾರು 40ಲಕ್ಷ ರೂ. ವೆಚ್ಚ ತಗಲುವುದಾಗಿ ತಿಳಿಸಿದ್ದರು. ಸಾನ್ವಿ ಹೆಸರಲ್ಲಿ ಜೂ. 19ರಂದು ವೈದ್ಯಕೀಯ ಚಿಕಿತ್ಸಾ ಸಮಿತಿ ರಚಿಸಿ ಸಹಾಯಕ್ಕಾಗಿ ಜನರಬಳಿ ತೆರಳಿದ್ದು, ಅಭೂತಪೂರ್ವ ಬೆಂಬಲ ಲಭಿಸಿದೆ. ಒಂದೇ ತಿಂಗಳ ಕಾಲಾವಧಿಯಲ್ಲಿ ನಿರೀಕ್ಷೆಗೂ ಮೀರಿ, ಒಟ್ಟು 53.56ಲಕ್ಷ ರೂ. ಸಂಗ್ರಹಿಸಲಾಗಿದೆ. ಚಿಕಿತ್ಸೆ ಪೂರ್ತಿಗೊಂಡರೂ ಕೆಲವು ವರ್ಷಗಳ ಕಾಲ ನಡೆಯಬೇಕಾದ ಮುಂದುವರಿಕಾ ಚಿಕಿತ್ಸೆ ಹಾಗೂ ಕುಟುಂಬದ ಜೀವನಕ್ಕಾಗಿ ಈ ಮೊತ್ತವನ್ನು ವಿನಿಯೋಗಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಮೀದ್ ಪೊಸಳಿಗೆ, ಸುವರ್ಣ ಮಾಸ್ಟರ್, ಭಾಸ್ಕರ ಎ, ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಬಿ.ಟಿ ಅಬ್ದುಲ್ಲಕುಞÂ, ರಾಜೇಶ್ ಮಾಸ್ಟರ್ ಉಪಸ್ಥಿತರಿದ್ದರು.
ತಲಸ್ಸೇಮಿಯಾದಿಂದ ಬಳಲುತ್ತಿರುವ ಸಾನ್ವಿಗೆ ಅಸ್ಥಿಮಜ್ಜೆ ಕಸಿ(ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟೇಶನ್)ಚಿಕಿತ್ಸೆ ನಡೆಸಬೇಕಾಗಿದೆ.