ಡೆಹ್ರಾಡೂನ್: ಇತ್ತೀಚಿಗೆ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳ ನಿಟ್ಟಿನಲ್ಲಿ ಹರಿದ್ವಾರದ ಕುಂಭಮೇಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕೇವಲ 1 ತಿಂಗಳ ಅವಧಿಗೆ ಮೊಟಕುಗೊಳಿಸಲಾಗಿದೆ. ಮೆಗಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಆರ್ ಟಿ- ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.
ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿನ ಗಂಗಾ ನದಿ ದಂಡೆ ಮೇಲೆ ಏಪ್ರಿಲ್ 1ರಿಂದ 30ರವರೆಗೆ ಕುಂಭ ಮೇಳ ನಡೆಯಲಿದ್ದು, ಏಪ್ರಿಲ್ 12, 14 ಮತ್ತು 27 ರಂದು ಪುಣ್ಯ ಸ್ನಾನ ಜರುಗಲಿದೆ. ಪುಣ್ಯಸ್ನಾನ ದಿನದಂದು ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ವಾಗುವುದರೊಂದಿಗೆ ಸಹಸ್ರಾರು ಭಕ್ತರು ಪವಿತ್ರ ನಂದಿಯಲ್ಲಿ ಮಿಂದೆಳುತ್ತಾರೆ. ಚೈತ್ರಾ ಪ್ರತಿಪಾಡವಾದ ಏಪ್ರಿಲ್ 13 ಮತ್ತು ಏಪ್ರಿಲ್ 21 ರಾಮ ನವಮಿಯಂದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ ಎಂದು ಆಡಳಿತವರ್ಗ ತಿಳಿಸಿದೆ.
12 ವರ್ಷಗಳಿಗೆ ಒಮ್ಮೆ ನಡೆಯುವ ಕುಂಭ ಮೇಳ ಸಾಮಾನ್ಯವಾಗಿ ಮೂರುವರೆ ತಿಂಗಳುಗಳ ಕಾಲ ನಡೆಯುತಿತ್ತು. ಕಳೆದ ಬಾರಿ 2010ರಲ್ಲಿ ಜನವರಿ 14ರಿಂದ ಏಪ್ರಿಲ್ 28ರವರೆಗೆ ಹರಿದ್ವಾರದಲ್ಲಿ ಕುಂಭ ಮೇಳ ನಡೆದಿತ್ತು. ಕುಂಭ ಮೇಳಕ್ಕೆ ಆಗಮಿಸುವ ಭಕ್ತಾಧಿಗಳು 72 ಗಂಟೆಗೂ ಹಿಂದಿನ ಆರ್ ಟಿ- ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ತೋರಿಸುವುದನ್ನು ಉತ್ತರಾಖಂಡ್ ಹೈಕೋರ್ಟ್ ಕಡ್ಡಾಯಗೊಳಿಸಿದೆ. ಕೋವಿಡ್-19 ಲಸಿಕೆ ಪಡೆದುಕೊಂಡಿರುವ ಭಕ್ತರು, ಅಧಿಕೃತ ಪೋರ್ಟಲ್ ನಲ್ಲಿ ಅವರ ಪ್ರಮಾಣಪತ್ರವನ್ನು ಅಳವಡಿಸಬೇಕಾಗಿದೆ. ಅಲ್ಲದೇ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ.
ಕುಂಭ ಮೇಳ ಅವಧಿಯಲ್ಲಿ ಕೋವಿಡ್-19 ಹರಡದಂತೆ ಸೂಕ್ತ ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಹಿನ್ನೆಲೆಯಲ್ಲಿ ಕುಂಭ ಮೇಳ ಅವಧಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಉತ್ತರಾಖಂಡ್ ಸರ್ಕಾರ ಜನತೆಗೆ ಸಲಹೆ ನೀಡಿದೆ. ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ , ವಿವಿಧ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಉತ್ತರಾಖಂಡ್ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ಮನವಿ ಮಾಡಿದ್ದಾರೆ.