ನವದೆಹಲಿ :ಅಖಿಲ ಭಾರತ ಕಾನೂನು ಸೇವೆ (ಎಐಜೆಎಸ್)ಯನ್ನು ಸ್ಥಾಪಿಸುವ ಕೇಂದ್ರದ ಪ್ರಸ್ತಾವವನ್ನು ದೇಶಾದ್ಯಂತ ಹೆಚ್ಚಿನ ರಾಜ್ಯಗಳು ಮತ್ತು ಉಚ್ಚ ನ್ಯಾಯಾಲಯಗಳು ಒಪ್ಪಿಕೊಂಡಿಲ್ಲ. ನ್ಯಾಯಾಂಗ ಆಡಳಿತದಲ್ಲಿ ಗೊಂದಲ ಮತ್ತು ಅಸ್ಥಿರತೆ ಸೃಷ್ಟಿ,ಬುಡಕಟ್ಟು ಜನಾಂಗಗಳು,ಸ್ಥಳೀಯ ಭಾಷಾ ಸಮಸ್ಯೆಗಳಿಂದ ಹಿಡಿದು ಸಂವಿಧಾನದ ಒಕ್ಕೂಟ ಸ್ವರೂಪಕ್ಕೆ ಚ್ಯುತಿಯವರೆಗೆ ವಿವಿಧ ಕಾರಣಗಳನ್ನು ಅವು ತಮ್ಮ ಅಸಮ್ಮತಿಗೆ ನೀಡಿವೆ ಎಂದು ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಒದಗಿಸಿರುವ ದತ್ತಾಂಶಗಳಂತೆ ಎಐಜೆಎಸ್ ಅನ್ನು ಸೃಷ್ಟಿಸುವ ಸರಕಾರದ 2015ರ ಪ್ರಸ್ತಾವಕ್ಕೆ ಹರ್ಯಾಣ ಮತ್ತು ಮಿಜೋರಾಂ ರಾಜ್ಯಗಳು ಹಾಗೂ ತ್ರಿಪುರಾ ಮತ್ತು ಸಿಕ್ಕಿಂ ಉಚ್ಚ ನ್ಯಾಯಾಲಯಗಳು ಮಾತ್ರ ಒಲವು ವ್ಯಕ್ತಪಡಿಸಿವೆ.
ಎಐಜೆಎಸ್ ಒಟ್ಟಾರೆ ನ್ಯಾಯದಾನ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರಕಾರವು ಪ್ರಸ್ತಾವಿಸಿರುವ,ಲೋಕಸೇವಾ ಆಯೋಗದ ಮಾದರಿಯಲ್ಲಿ ಜಿಲ್ಲಾ ನ್ಯಾಯಾಧೀಶರಿಗಾಗಿ ರಾಷ್ಟ್ರಮಟ್ಟದ ನೇಮಕಾತಿ ಪ್ರಕ್ರಿಯೆಯಾಗಿದೆ.
ಆದರೆ ಸಂವಿಧಾನದಡಿ ಕೆಳ ನ್ಯಾಯಾಂಗಕ್ಕೆ ನೇಮಕಗಳನ್ನು ಮಾಡುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ. ಪ್ರಸಕ್ತ ಇದಕ್ಕಾಗಿ ರಾಜ್ಯಗಳು ಖಾಲಿ ಹುದ್ದೆಗಳನ್ನು ಆಧರಿಸಿ ಉಚ್ಚ ನ್ಯಾಯಾಲಯಗಳೊಂದಿಗೆ ಸಮಾಲೋಚಿಸಿ ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತಿವೆ. ಎಐಜೆಎಸ್ ರಾಜ್ಯಗಳ ಅಧಿಕಾರಗಳನ್ನು ದುರ್ಬಲಗೊಳಿಸುತ್ತದೆ ಎಂದು ಭಾವಿಸಲಾಗಿದೆ.
ಕೇಂದ್ರವು ಕೆಳ ನ್ಯಾಯಾಂಗದಲ್ಲಿ ನ್ಯಾಯಿಕ ಮೂಲಸೌಕರ್ಯಗಳ ಕುರಿತು ಚರ್ಚಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಸಚಿವರ ಉದ್ದೇಶಿತ ಸಭೆಯ ಅಜೆಂಡಾದಲ್ಲಿ ಈ ಪ್ರಸ್ತಾವವನ್ನು ಸೇರಿಸುವ ಮೂಲಕ ವಿವಾದಾತ್ಮಕ ಸುಧಾರಣೆಗೆ ಹೊಸದಾಗಿ ಒತ್ತು ನೀಡುವ ಸಾಧ್ಯತೆಯಿದೆ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳು ಹೊಸ ಪ್ರಯತ್ನವನ್ನು ಮಾಡಲಾಗುವುದು ಎಂದು ಕೇಂದ್ರ ಸಚಿವ ಕಿರಣ ರಿಜಿಜು ಅವರು ನವಂಬರ್ನಲ್ಲಿ ತಿಳಿಸಿದ್ದರು.
ಅರುಣಾಚಾಲ ಪ್ರದೇಶ,ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಪಂಜಾಬ್ ಸೇರಿದಂತೆ ಎಂಟು ರಾಜ್ಯಗಳು 2015ರ ಪ್ರಸ್ತಾವಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ. ಬಿಹಾರ,ಛತ್ತೀಸ್ಗಡ ಮತ್ತು ಒಡಿಶಾ ಸೇರಿದಂತೆ ಐದು ರಾಜ್ಯಗಳು ಪ್ರಸ್ತಾವದಲ್ಲಿ ಬದಲಾವಣೆಗಳನ್ನು ಕೋರಿದ್ದರೆ 13 ರಾಜ್ಯಗಳು ಯಾವುದೇ ಉತ್ತರ ನೀಡಿಲ್ಲ.
ಅರುಣಾಚಲ ಪ್ರದೇಶವು ಬುಡಕಟ್ಟು ರಾಜ್ಯವಾಗಿದ್ದು,ತನ್ನದೇ ಆದ ವಿಶಿಷ್ಟ ಬುಡಕಟ್ಟು ಸಂಪ್ರದಾಯಗಳು ಮತ್ತು ತತ್ತ್ವಗಳನ್ನು ಹೊಂದಿದೆ ಹಾಗೂ ನ್ಯಾಯದಾನ ವಿಧಾನಗಳು ಬುಡಕಟ್ಟುಗಳಿಂದ ಬುಡಕಟ್ಟುಗಳಿಗೆ ವಿಭಿನ್ನವಾಗಿವೆ. ಹೀಗಾಗಿ ಸಾಮಾನ್ಯ ನ್ಯಾಯಾಂಗ ಸೇವೆಗಳನ್ನು ಹೊಂದುವ ಪ್ರಸ್ತಾವವು ಸೂಕ್ತವಾಗಿಲ್ಲ,ಅದು ಬುಡಕಟ್ಟು ಜನಾಂಗಗಳ ನ್ಯಾಯಾಡಳಿತದಲ್ಲಿ ಗೊಂದಲಗಳು ಮತ್ತು ಅಸ್ಥಿರತೆಯನ್ನು ಸೃಷ್ಟಿಸುತ್ತದೆ ಎಂದು ಆ ರಾಜ್ಯವು ತನ್ನ ಉತ್ತರದಲ್ಲಿ ತಿಳಿಸಿದೆ.
ಸಿಕ್ಕಿಂ ಮತ್ತು ತ್ರಿಪುರಾ ಉಚ್ಚ ನ್ಯಾಯಾಲಯಗಳು ಪ್ರಸ್ತಾವಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದರೆ,ಆಂಧ್ರಪ್ರದೇಶ,ಬಾಂಬೆ,ದಿಲ್ಲಿ, ಗುಜರಾತ್, ಕರ್ನಾಟಕ, ಕೇರಳ, ಮದ್ರಾಸ್, ಪಾಟ್ನಾ,ಪಂಜಾಬ್ ಮತ್ತು ಹರ್ಯಾಣ,ಕಲಕತ್ತಾ,ಜಾರ್ಖಂಡ್,ರಾಜಸ್ಥಾನ ಹಾಗೂ ಒಡಿಶಾ ಸೇರಿದಂತೆ 13 ಉಚ್ಚ ನ್ಯಾಯಾಲಯಗಳು ಪ್ರಸ್ತಾವವನ್ನು ವಿರೋಧಿಸಿವೆ. ಅಲಹಾಬಾದ್,ಛತ್ತೀಸ್ಗಡ,ಹಿಮಾಚಲ ಪ್ರದೇಶ,ಮೇಘಾಲಯ,ಉತ್ತರಾಖಂಡ ಮತ್ತು ಮಣಿಪುರ ಉಚ್ಚ ನ್ಯಾಯಾಲಯಗಳು ಪ್ರಸ್ತಾವದಲ್ಲಿ ಬದಲಾವಣೆಗಳನ್ನು ಕೋರಿವೆ. ಗುವಾಹಟಿ ಮತ್ತು ಮಧ್ಯಪ್ರದೇಶ ಉಚ್ಚ ನ್ಯಾಯಾಲಯಗಳು ಪ್ರಸ್ತಾವಕ್ಕೆ ಉತ್ತರಿಸಿಲ್ಲ.
ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಕೇಂದ್ರೀಕರಣಕ್ಕೆ ಸವೋಚ್ಚ ನ್ಯಾಯಾಲಯವು 2017ರಲ್ಲಿ ವಿಫಲ ಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಉಚ್ಚ ನ್ಯಾಯಾಲಯಗಳ ವಿರೋಧಗಳು ಮಹತ್ವವನ್ನು ಪಡೆದುಕೊಂಡಿವೆ.