ಆಲಪ್ಪುಳ: ಕೇರಳದ ಮೂಲಕ ಸಾಗುತ್ತಿರುವ ಭಾರತ ಜೋಡೊ ಯಾತ್ರೆ ಭಾನುವಾರ 11ನೇ ದಿನ ಪೂರೈಸಿದೆ. ಆಲಪ್ಪುಳ ಜಿಲ್ಲೆಯ ಓಟ್ಟಪ್ಪನ, ಪುರಕ್ಕಾಡ್, ಕುರುವಟ್ಟಾ ಮಾರ್ಗವಾಗಿ ವಂದನಂ ಎಂಬ ಸ್ಥಳವನ್ನು ಯಾತ್ರೆ ತಲುಪಿತು. ಕುಟ್ಟನಾಡ್ ರೈತರ ಜೊತೆ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು ಸಂವಾದ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂವೇದನಾರಹಿತ ವರ್ತನೆಯಿಂದ ರೈತರು ತೊಂದರೆ ಎದುರಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾಷೆ ಹಾಗೂ ಧರ್ಮದ ವಿಚಾರದಲ್ಲಿ ದೇಶವನ್ನು ಒಡೆಯುತ್ತಿದೆ ಎಂದು ಆರೋಪಿಸಿದರು. 'ಸಾಮರಸ್ಯವಿಲ್ಲದೇ ಅಭಿವೃದ್ಧಿ ಇಲ್ಲ, ಅಭಿವೃದ್ಧಿ ಸಾಧ್ಯವಾಗದಿದ್ದರೆ ಉದ್ಯೋಗ ಇಲ್ಲ, ಉದ್ಯೋಗ ಇಲ್ಲದಿದ್ದರೆ ಭವಿಷ್ಯವೇ ಇಲ್ಲ. ಭಾರತ ಜೋಡೊ ಯಾತ್ರೆಯು ಹತಾಶೆಯ ದ್ವನಿಗಳನ್ನು ಒಗ್ಗೂಡಿಸುತ್ತಿದೆ. ನಿರುದ್ಯೋಗದ ಸಂಕೋಲೆಗಳನ್ನು ಬಿಡಿಸುತ್ತಿದೆ' ಎಂದು ಹೇಳಿದರು.
ಕೇರಳದ ಎಡರಂಗದ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು. ಮರಳು ಮಾಫಿಯಾದಿಂದ ತೊಂದರೆ ಎದುರಿಸುತ್ತಿರುವ ಕುಟುಂಬಗಳನ್ನು ರಾಹುಲ್ ಭೇಟಿಯದರು. ಈ ಕುಟುಂಬಗಳು 466 ದಿನದಿಂದ ಪ್ರತಿಭಟನೆ ನಡೆಸುತ್ತಿವೆ.
ಯಾತ್ರೆಯ ಕೆಲವು ಚಿತ್ರಗಳನ್ನು ರಾಹುಲ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. 'ಇವು ಕೇವಲ ಚಿತ್ರಗಳಲ್ಲ. ದೇಶದ ಪ್ರತಿಯೊಬ್ಬರ ಭಾವನೆ, ಪ್ರೀತಿ, ಭರವಸೆಗಳನ್ನು ಇವು ಬಿಂಬಿಸುತ್ತವೆ' ಎಂದು ಅವರು ಉಲ್ಲೇಖಿಸಿದ್ದಾರೆ.
'ರಾಹುಲ್ ಮನಸು ಬದಲಿಸಬಹುದು'
ಕಾಂಗ್ರೆಸ್
ಮುಖಂಡ ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿರಲಿ ಇಲ್ಲದಿರಲಿ, ಅವರು
ಪಕ್ಷದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹಿರಿಯ ಮುಖಂಡ ಪಿ.ಚಿದಂಬರಂ
ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆಯನ್ನು ಅವರು
ಪ್ರತಿಪಾದಿಸಿದ್ದಾರೆ. ರಾಹುಲ್ ಅವರು ಅಧ್ಯಕ್ಷರಾಗಲು ಈಗಲೂ ಒಪ್ಪಿಕೊಂಡಿಲ್ಲ. ಆದರೆ,
ಅವರು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಚಿದಂಬರಂ ವಿಶ್ವಾಸ
ವ್ಯಕ್ತಪಡಿಸಿದ್ದಾರೆ.
ರಾಹುಲ್ ಪರ ನಿರ್ಣಯ ಅಂಗೀಕಾರ
ರಾಹುಲ್
ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಲಿ ಎಂಬ ಕೂಗು ಬಲವಾಗುತ್ತಿದೆ. ಛತ್ತೀಸಗಡ, ರಾಜಸ್ಥಾನ
ಹಾಗೂ ಗುಜರಾತ್ನ ಕಾಂಗ್ರೆಸ್ ಘಟಕಗಳು ರಾಹುಲ್ ಅವರು ಅಧ್ಯಕ್ಷರಾಗಲಿ ಎಂದು
ಒತ್ತಾಯಿಸಿವೆ. ರಾಹುಲ್ ಅವರು ಅಧ್ಯಕ್ಷರಾಗಲಿ ಎಂಬುದಾಗಿ ಆಗ್ರಹಿಸಿ ಛತ್ತೀಸಗಡದ
ಕಾಂಗ್ರೆಸ್ ಘಟಕವು ಭಾನುವಾರ ನಿರ್ಣಯ ಅಂಗೀಕರಿಸಿದೆ. ಮುಖ್ಯಮಂತ್ರಿ ಭೂಪೇಶ್ ಬಘೆಲ್
ಅವರು ಪ್ರಸ್ತಾಪಿಸಿದ ನಿರ್ಣಯವನ್ನು ಆರೋಗ್ಯ ಸಚಿವ ಟಿ.ಎಸ್. ಸಿಂಹದೇವ್ ಹಾಗೂ ಇತರರು
ಬೆಂಬಲಿಸಿದರು. ಅಧ್ಯಕ್ಷರ ಚುನಾವಣೆಯಲ್ಲಿ ರಾಜ್ಯ ಘಟಕದ 310 ಸದಸ್ಯರು ಮತದಾನದ ಹಕ್ಕು
ಹೊಂದಿದ್ದಾರೆ. ಅಧ್ಯಕ್ಷ ಹುದ್ದೆಗೆ ರಾಹುಲ್ ಅವರ ಮನವೊಲಿಸಲು ರಾಜಸ್ಥಾನ ರಾಜ್ಯ ಘಟಕ
ಮುಂದಾಗಿದೆ.