ಕಾಸರಗೋಡು: ಅಕ್ಕಿ, ಸೀಮೆ ಎಣ್ಣೆ, ಸಕ್ಕರೆ ಹೀಗೆ ಅತ್ಯಾವಶ್ಯಕ ಪಡಿತರ ಮಾತ್ರ ಲಭಿಸುತ್ತಿದ್ದ ರೇಶನ್ ಅಂಗಡಿಗಳು ಹೈಟೆಕ್ ಆಗಿ ಬರಲಿದ್ದು, ರೇಶನ್ ಜತೆಗೆ ಬ್ಯಾಂಕಿಂಗ್, ಗ್ಯಾಸ್ ವಿತರಣೆ, ಅಕ್ಷಯ ಸೇವಾ ಸೌಲಭ್ಯಗಳೂ ಲಭ್ಯವಾಗಲಿದೆ. ಪಡಿತರ ಅಂಗಡಿಗಳು ಇನ್ನು ಮುಂದೆ ಕೆ-ಸ್ಟೋರ್ಗಳಾಗಿ ಗುರುತಿಸಿಕೊಳ್ಳಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೆ-ಸ್ಟೋರ್ ಯೋಜನೆಗೆ ಮೊದಲ ಹಂತದಲ್ಲಿ ಐದು ಪಡಿತರ ಅಂಗಡಿಗಳನ್ನು ಆಯ್ಕೆ ಮಾಡಲಾಗಿದೆ. ಪಡಿತರ ಅಂಗಡಿಯಲ್ಲಿ ಹೆಚ್ಚಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲಿದ್ದು, ಗ್ಯಾಸ್, ಬ್ಯಾಂಕಿಂಗ್ ಜತೆಗೆ ಮಿಲ್ಮಾ ಉತ್ಪನ್ನಗಳು, 5 ಕೆಜಿತೂಕದ ಚೋಟು ಗ್ಯಾಸ್ ಸಿಲಿಂಡರ್, ಸಪ್ಲೈಕೋ ಮತ್ತು ಶಬರಿ ಸಂಸ್ಥೆಗಳ ವಿವಿಧ ಉತ್ಪನ್ನಗಳು ಲಭ್ಯವಾಗಲಿದೆ. ಹೊಸದುರ್ಗ ತಾಲೂಕಿನಲ್ಲಿ ಮೂರು ಹಾಗೂ ವೆಳ್ಳರಿಕುಂಡು ತಾಲೂಕಿನಲ್ಲಿ ಎರಡು ರೇಶನ್ ಅಂಗಡಿಗಳನ್ನು ಕೆ-ಸ್ಟೋರ್ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಹೊಸದುರ್ಗ ತಾಲೂಕಿನ ವಲಿಯಪರಂಬ, ಕೂಟಪುನ್ನ ಮತ್ತು ಆಯಂಬಾರ ಪಡಿತರ ಅಂಗಡಿಗಳು ಮತ್ತು ವೆಳ್ಳರಿಕುಂಡು ತಾಲೂಕಿನ ಪೂಂಗೋಡ್ ಮತ್ತು ಪೆರಿಯಾ ಪಡಿತರ ಅಂಗಡಿಗಳು ಹೈಟೆಕ್ ಸೇವೆಯಾಗಲಿವೆ.
ಐದು ಕೆ-ಸ್ಟೋರ್ಗಳಿಗೆ ಚಾಲನೆ:
ಜಿಲ್ಲೆಯಲ್ಲಿ ಐದು ಪಡಿತರ ಅಂಗಡಿಗಳು ಹಾಗೂ ಕೆ ಸ್ಟೋರ್ಗಳು ಶುಕ್ರವಾರ ಆರಂಭಗೊಂಡಿತು. ವಲಿಯಪರಂ (ಸಂ. 88) ಮತ್ತು ಪೂಂಗೋಡ್ (ಸಂ. 55) ಕೆ-ಸ್ಟೋರ್ ಮಳಿಗೆಗಳನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ಕೂಟಪುನ್ನ, ಕೋಡೋಬೇಲೂರ್ ಮತ್ತು ಆಯಂಬರ ಕೇಂದ್ರಗಳನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿದರು.