ಇಂದಿನ ಟಿಪ್ಪಣಿ
೧. ಸುದ್ದಿ ಶೀರ್ಷಿಕೆಗಳಲ್ಲಿ ಶುದ್ಧಿ ಇರಬೇಕು!
ಇವು ಕನ್ನಡದ ಪ್ರಮುಖ ದಿನಪತ್ರಿಕೆಗಳ ಇತ್ತೀಚಿನ (ಕಳೆದ ಮೂರ್ನಾಲ್ಕು ದಿನಗಳಿಂದೀಚೆಗಿನ) ಸಂಚಿಕೆಗಳಿಂದ ಆಯ್ದ ಕೆಲವು ಸುದ್ದಿ ಶೀರ್ಷಿಕೆಗಳು. ಏನಾಗಿದೆ ಇವುಗಳ ಶುದ್ಧಿಗೆ ಎಂದು ಒಂದೊಂದಾಗಿ ನೋಡೋಣ.
ಅ) ‘ಪಶ್ಚಿಮಘಟ್ಟ ಸೂಕ್ಷ್ಮ’ ಕರಡಿಗೆ ರಾಜ್ಯ ವಿರೋಧ [ಕನ್ನಡಪ್ರಭ] - ಕಾಗುಣಿತ ತಪ್ಪಿಲ್ಲ, ವ್ಯಾಕರಣ ದೋಷ ಇಲ್ಲ. ಆದರೂ ‘ಕರಡಿಗೆ’ ಪದ ಗೊಂದಲ ಮೂಡಿಸುತ್ತದೆ. ಸುದ್ದಿ ಇರುವುದು ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮವಲಯ ಎಂದು ಸಾರುವ ಕರಡು ಅಧಿಸೂಚನೆಯ ಬಗ್ಗೆ. ಕರಡು ಅಂದರೆ draft. ಅದಕ್ಕೆ ಚತುರ್ಥೀ ವಿಭಕ್ತಿಪ್ರತ್ಯಯ ‘’ಇಗೆ’ ಸೇರಿದಾಗ ‘ಕರಡಿಗೆ’ ಎಂದಾಗುವುದು ಹೌದು. ಆದರೆ ಓದುಗನ ಕಣ್ಮುಂದೆ ಕರಡಿ ಥಕ ಥೈ ಕುಣಿದಂತಾಗಬಾರದಲ್ಲ? ಈ ಶೀರ್ಷಿಕೆಯನ್ನು " ‘ಪಶ್ಚಿಮಘಟ್ಟ ಸೂಕ್ಷ್ಮ’ ಕರಡು : ರಾಜ್ಯದ ವಿರೋಧ " ಎಂದು ಬರೆಯಬಹುದಿತ್ತು.
ಆ) ‘ಕಲಾಪ ಆರಂಭಕ್ಕೆ ಮುನ್ನ ಎಲ್ಲ ಗುಂಡಿಗೆ ಮುಕ್ತಿ’ [ಉದಯವಾಣಿ] - ಕಲಾಪ ಆರಂಭಕ್ಕೆ ಮುನ್ನ ಯಾರೋ ಹಾರಿಸಿದ ಗುಂಡು ತಾಗಿ ಎಲ್ಲರೂ ಸತ್ತರೇ? ಕಲಾಪ ಆರಂಭಕ್ಕೆ ಮುನ್ನ ಯಾರೂ ಯಾವ ನಮೂನೆಯದೂ‘ಗುಂಡು’ ಸೇವಿಸಬಾರದೆಂದು ಆದೇಶವೇ? ಕಲಾಪ ಆರಂಭಕ್ಕೆ ಮುನ್ನ ಎಲ್ಲರೂ ತಂತಮ್ಮ ಅಂಗಿಯ ಗುಂಡಿ ಬಿಚ್ಚಿ ಬರಬೇಕೆಂದು ಅರ್ಥವೇ? ಒಂದೂ ಅಲ್ಲ! ಸುದ್ದಿ ಇರುವುದು ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ. ಶೀರ್ಷಿಕೆಯಲ್ಲಿ ‘ಗುಂಡಿಗಳಿಗೆ’ ಎಂದು ಬರೆದಿದ್ದರೆ ಸರಿಯಾಗುತ್ತಿತ್ತು. ಅಲ್ಲದೆ, ‘ಎಲ್ಲ’ ಎಂಬ ಪದದ ಬಳಿಕ ಬಹುವಚನ ಇರಲೇಬೇಕು.
ಇ) ‘ವೃದ್ಧೆ ಹುಡುಕಿಕೊಟ್ಟ ವಾಟ್ಸ್ಅಪ್ ಗ್ರೂಪ್’! [ಪ್ರಜಾವಾಣಿ] - ವಾಟ್ಸ್ಅಪ್ ಗ್ರೂಪ್ ಕಾಣೆಯಾಗಿತ್ತಂತೆ. ವೃದ್ಧೆಯೊಬ್ಬಳು ಅದನ್ನು ಹುಡುಕಿ ಕೊಟ್ಟಳು. ಆ ವೃದ್ಧೆಯ ಕಣ್ಣುಗಳ ತೀಕ್ಷ್ಣತೆಯನ್ನೂ ತಾಂತ್ರಿಕ ನೈಪುಣ್ಯವನ್ನೂಮೆಚ್ಚಲೇಬೇಕು! ವಿಷಯ ಹಾಗಲ್ಲ. ವೃದ್ಧೆಯೊಬ್ಬಳು ನಾಪತ್ತೆಯಾಗಿದ್ದಳು. ಅವಳನ್ನು ಹುಡುಕುವುದಕ್ಕೆ ವಾಟ್ಸ್ಅಪ್ ಗ್ರೂಪ್ ನೆರವಾಯ್ತು. ಅರ್ಥ ವಿರುದ್ಧವಾದರೂ ಅಡ್ಡಿಯಿಲ್ಲ ಶೀರ್ಷಿಕೆಯಲ್ಲಿ ದ್ವಿತೀಯಾ ವಿಭಕ್ತಿ ಬಳಸೆವುಎಂದು ಅದೇನು ಮೊಂಡುತನವೋ ಈಗಿನ ಪತ್ರಕರ್ತರದು. ಅರ್ಥ ಅಸಂಬದ್ಧವಾಗಿದೆಯೆಂದು ಯಾರೋ ಓದುಗರು ಗಮನ ಸೆಳೆದಿರಬೇಕು, ಆಮೇಲೆ ವೆಬ್ ಆವೃತ್ತಿಯಲ್ಲಿ ‘ವೃದ್ಧೆಯ ಹುಡುಕಿಕೊಟ್ಟ ವಾಟ್ಸ್ಅಪ್ ಗ್ರೂಪ್!’ ಎಂದು ತಿದ್ದಲಾಗಿದೆ. ವಿಭಕ್ತಿಯೇ ಇಲ್ಲದೆ ಅರ್ಥವ್ಯತ್ಯಾಸವಾಗುವುದಕ್ಕಿಂತ ಷಷ್ಠೀ ವಿಭಕ್ತಿಯನ್ನಾದರೂ ಬಳಸಿದ್ದಾರಲ್ಲ ಪುಣ್ಯ.
ಈ) ‘ಪಾಕ್ ವಿರುದ್ಧ ಪ್ರತೀಕಾರಕ್ಕೆ ಸೇನೆ ಸಿದ್ಧತೆ’ [ವಿಜಯವಾಣಿ] - ಇಲ್ಲಿರುವುದು ಕಾಗುಣಿತ ದೋಷ. ‘ಪ್ರತೀಕಾರ’ ಅಲ್ಲ, ‘ಪ್ರತಿಕಾರ’ ಆಗಬೇಕು. ಪ್ರತಿಯಾಗಿ ಮಾಡುವುದನ್ನು ಪ್ರತಿಕಾರ ಎನ್ನುತ್ತೇವೆ. ಸ್ವಾರಸ್ಯವೆಂದರೆಶೀರ್ಷಿಕೆಯಲ್ಲಿ ಮಾತ್ರ ಪ್ರತೀಕಾರ ಎಂದು ಅಚ್ಚಾಗಿದೆ, ಸುದ್ದಿವಿವರದಲ್ಲಿ ಪ್ರತಿಕಾರ ಎಂದು ಸರಿಯಾಗಿಯೇ ಇದೆ.
ಉ) ‘ಇತಿಹಾಸ ನಿರ್ಮಿಸಿದ ಮಹಿಳಾ ನಿರೂಪಕಿ’ [ವಿಜಯಕರ್ನಾಟಕ] - ಇದೊಂದು ಕೆಟ್ಟ ಚಾಳಿ. ‘ಮಹಿಳಾ ಲೇಖಕಿ’, ‘ಮಹಿಳಾ ವೈದ್ಯೆ’, ‘ಮಹಿಳಾ ಚಾಲಕಿ’ ಅಂತೆಲ್ಲ ಬರೆಯುವುದು. ಸ್ತ್ರೀಲಿಂಗದ ಪದವನ್ನೇ ಬಳಸಿದ ಮೇಲೆ ಅದರ ಮುಂದೆ ‘ಮಹಿಳಾ’ ಏಕೆ? ಸೌದಿ ಅರೇಬಿಯಾದ ಟಿವಿಯಲ್ಲಿ ಇದುವರೆಗೆ ಬೆಳಗಿನ ಸುದ್ದಿನಿರೂಪಣೆಗೆ ಮಾತ್ರ ಮಹಿಳೆಯರಿರುತ್ತಿದ್ದರಂತೆ, ಈಗ ಸಂಜೆಯ ಸುದ್ದಿನಿರೂಪಣೆಗೂ ಮಹಿಳೆಯರಿಗೆ ಅನುಮತಿ ಸಿಕ್ಕಿದೆಯಂತೆ. ಹಾಗೆ ಸೌದಿ ಅರೇಬಿಯಾದ ಟಿವಿಯಲ್ಲಿ ಸಂಜೆಯ ಸುದ್ದಿ ಓದಿದ ಮೊತ್ತಮೊದಲ ಮಹಿಳೆಯನ್ನು ಕುರಿತ ಸುದ್ದಿ ಇದು.
ಊ) ‘ವನಿತೆಯರ ನಾಗಲೋಟಕ್ಕೆ ಕಡಿವಾಣವಿಲ್ಲ’ [ವಿಶ್ವವಾಣಿ] - ನಾಗನೂ ಇಲ್ಲ, ಲೋಟವೂ ಇಲ್ಲ. ಪದಪರಿಚಯವಂತೂ ಇಲ್ಲವೇ ಇಲ್ಲ. ನಾಲ್ಕು ಕಾಲ್ಗಳ ಓಟ -> ನಾಲ್ಕಾಲೋಟ > ನಾಕ್ಕಾಲೋಟ -> ನಾಗಾಲೋಟ ಇದು ಪದದ ವ್ಯುತ್ಪತ್ತಿ. ಕುದುರೆ, ಜಿಂಕೆ, ಚಿರತೆ ಮುಂತಾದ ಪ್ರಾಣಿಗಳ ಓಟ, ಅತಿ ವೇಗದ್ದು, ಕೆಲವೊಮ್ಮೆ ನಾಲ್ಕೂ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಓಡುವ ರೀತಿ- ಇದನ್ನು ಬಣ್ಣಿಸಲು ‘ನಾಗಾಲೋಟ’ ಪದ ಹುಟ್ಟಿಕೊಂಡಿರುವುದು.
===
೨. ‘ದಂಪತಿ’ಯಂತೆಯೇ ‘ಸಿಬ್ಬಂದಿ’ಗೂ ಬಹುವಚನ ಬೇಕಿಲ್ಲ.
ಕಳೆದ ವಾರದ ಕಲಿಕೆಯಲ್ಲಿ ‘ದಂಪತಿ’ ಪದವನ್ನು ಕುರಿತ ಟಿಪ್ಪಣಿ ಇತ್ತು. "ಒಂದು" ಜೋಡಿ ಮತ್ತು "ಒಂದಕ್ಕಿಂತ ಹೆಚ್ಚು" ಜೋಡಿಗಳು ಎಂಬ ಸ್ಪಷ್ಟತೆ ಮೂಡುವುದಕ್ಕೋಸ್ಕರ ಕ್ರಮವಾಗಿ ‘ದಂಪತಿ’ ಮತ್ತು ‘ದಂಪತಿಗಳು’ ಎಂದು ಹೇಳುವುದು/ಬರೆಯುವುದು ಹೆಚ್ಚು ತಾರ್ಕಿಕ. ಆ ವಿವರಣೆ ಕೆಲವು ಸಂಸ್ಕೃತ ಪಂಡಿತರಿಗೆ ಒಂದೋ ಅರ್ಥವಾಗಿಲ್ಲ, ಅಥವಾ ಇಷ್ಟವಾಗಿಲ್ಲ. ಸಂಸ್ಕೃತದಲ್ಲಿನ ಲಿಂಗ ವಚನಗಳು ಕನ್ನಡದಲ್ಲೂ ಹಾಗೆಯೇ ಇರುತ್ತವೆ/ಇರಬೇಕುಎಂದೇನಿಲ್ಲ. ಉದಾಹರಣೆಗೆ, ಸಂಸ್ಕೃತದಲ್ಲಿ ‘ಪ್ರಾಣ’ ನಿತ್ಯಬಹುವಚನ ಶಬ್ದ (ಪಂಚಪ್ರಾಣಗಳು ಎಂಬ ಕಾರಣದಿಂದ). "ಪ್ರಾಣಾನ್ ಅತ್ಯಜತ್" ಎಂದು ಸಂಸ್ಕೃತದಲ್ಲಿ ಬರೆಯುತ್ತೇವೆ. ಕನ್ನಡದಲ್ಲಿ "ಪ್ರಾಣಗಳನ್ನು ಬಿಟ್ಟರು" ಎಂದು ಬರೆಯುತ್ತೇವೆಯೇ? ಸಂಸ್ಕೃತದಲ್ಲಿ `ಪತ್ನಿ’ ಎಂಬರ್ಥದಲ್ಲಿ ಒಂದು ಪುಲ್ಲಿಂಗ ಪದವೂ ಇನ್ನೊಂದು ನಪುಂಸಕಲಿಂಗ ಪದವೂ ಇದೆ. ಹಾಗಂತ ಕನ್ನಡದಲ್ಲಿ ‘ಹೆಂಡತಿ ಬಂದಿದ್ದಾನೆ’, ‘ಹೆಂಡತಿ ಬಂದಿದೆ’ ಎಂದು ಬರೆಯುತ್ತೇವೆಯೇ? ಇಲ್ಲ ತಾನೆ?
‘ಸಿಬ್ಬಂದಿ’ ಎಂಬ ಪದ ಅರೇಬಿಕ್ ಮತ್ತು ಪಾರಸಿ ಭಾಷೆಗಳ ‘ಸಿಫ್ಬಂದಿ’ ಯಿಂದ ಬಂದದ್ದು ಎನ್ನುತ್ತಾರೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ಕಚೇರಿಯ ನೌಕರವರ್ಗ ಎಂದು ಆ ಪದದ ಅರ್ಥ. ಇಂಗ್ಲಿಷ್ನಲ್ಲಾದರೆ Staff. ಅಲ್ಲಿ ನಾವು ಹೇಗೆ Staffs ಎನ್ನುವುದಿಲ್ಲವೋ ಹಾಗೆಯೇ ಇಲ್ಲಿಯೂ ಬಹುವಚನ ಬೇಡ. ಸಿಬ್ಬಂದಿಗಳು, ಸಿಬ್ಬಂದಿಗಳನ್ನು, ಸಿಬ್ಬಂದಿಗಳಿಂದ, ಸಿಬ್ಬಂದಿಗಳಿಗೆ, ಸಿಬ್ಬಂದಿಗಳ, ಸಿಬ್ಬಂದಿಗಳಲ್ಲಿ... ಇವುಗಳನ್ನು ಕ್ರಮವಾಗಿ ಸಿಬ್ಬಂದಿ, ಸಿಬ್ಬಂದಿಯನ್ನು, ಸಿಬ್ಬಂದಿಯಿಂದ, ಸಿಬ್ಬಂದಿಗೆ, ಸಿಬ್ಬಂದಿಯ, ಸಿಬ್ಬಂದಿಯಲ್ಲಿ ಎಂದು ಬರೆಯುವುದು ಒಳ್ಳೆಯದು. ಅಕ್ಷರಗಳ ಉಳಿತಾಯವೂ ಆಗುತ್ತದೆ, ವ್ಯಾಕರಣಬದ್ಧವೂ ಆಗುತ್ತದೆ.
====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:
ಅ) ಕವಯತ್ರಿ ತಪ್ಪು. ಕವಯಿತ್ರೀ ಸರಿ. (ಕವಿ ಶಬ್ದದ ಸ್ತ್ರೀಲಿಂಗ ಪದ)
ಆ) ಕಶ್ಮಲ ಸರಿ. ಕಲ್ಮಷ ಸಹ ಸರಿ. ಕೊಳೆ, ಧೂಳು, ಪಾಪ, ಅಪವಾದ, ಅಪಕೀರ್ತಿ ಮುಂತಾದ ಅರ್ಥಗಳು. ಕಷ್ಮಲ ಅಥವಾ ಕಲ್ಮಶ ಎಂದು ಬರೆದರೆ ತಪ್ಪಾಗುತ್ತದೆ.
ಇ) ವಿಜ್ರಂಭಣೆ ತಪ್ಪು. ವಿಜೃಂಭಣೆ ಸರಿ.
ಈ) ಪರಿಶಿಷ್ಠ ತಪ್ಪು. ಪರಿಶಿಷ್ಟ ಸರಿ. ಮುಖ್ಯಭಾಗದಲ್ಲಿ ಸೇರದೆ ಬಿಟ್ಟುಹೋಗಿರುವ ಎಂದು ಅರ್ಥ.
ಉ) ಕುಟುಂಬಸ್ತ, ಪೀಠಸ್ತ, ಗ್ರಾಮಸ್ತ, ದೇಶಸ್ತ... ಇವೆಲ್ಲದರಲ್ಲೂ ‘ಸ್ತ’ ಬದಲಿಗೆ ‘ಸ್ಥ’ ಇರಬೇಕು.