ಕಾಸರಗೋಡು/ಬದಿಯಡ್ಕ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ವಿಶೇಷ ಚಂಡಿಕಾ ಹೋಮ ಮತ್ತಿತರ ಸೇವೆಗಳನ್ನು ಪೂರೈಸಿದ ಬಳಿಕ ಕಾಸರಗೋಡಿನ ಬೇಳ ಸಮೀಪದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶನಿವಾರ ಬೆಳಿಗ್ಗೆ ಬೇಕಲದ ಲಲಿತ್ ರೆಸಾರ್ಟ್ ನಿಂದ ಆಗಮಿಸಿದರು. ಅವರಿಗೆ ಸಕಲ ಸರ್ಕಾರಿ ಗೌರಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಶ್ರೀ ಕ್ಷೇತ್ರದಲ್ಲಿ ಲಂಕಾ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಗಣಪತಿಹೋಮ, ನವಕಾಭಿಷೇಕ, ಆಶ್ಲೇಷ ಬಲಿ, ಅಲಂಕಾರ ಪೂಜೆಯ ಬಳಿಕ ಮಹಾಪೂಜೆ ನಡೆಯಿತು. ಶುಕ್ರವಾರ ರಾತ್ರಿಯೇ ರಂಗಪೂಜೆ ನಡೆಸಲಾಯಿತು. ಜ್ಯೋತಿಷ್ಯರತ್ನ ಬೇಳ ಪದ್ಮನಾಭ ಶರ್ಮ ಅವರು ಹಿಂದೆ ಶ್ರೀಲಂಕಾ ಪ್ರಧಾನಿ ಮನೆಯಲ್ಲಿ ಪ್ರಶ್ನೆ ಚಿಂತನೆ ಇರಿಸಿದಾಗ ಕಂಡ ದೋಷ ಪರಿಹಾರಕ್ಕಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ಹಾಗೂ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ದೇವರಿಗೆ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಬೇಳ ರಾಮಚಂದ್ರ ಅಡಿಗ, ಕಿಳಿಂಗಾರು ಗೋಪಾಲಕೃಷ್ಣ ಭಟ್, ಮುರಳೀಕೃಷ್ಣ ಅಸ್ರ ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು. ಅಂತಾರಾಷ್ಟ್ರೀಯ ಮಟ್ಟದ ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಆಡಳಿತ ಸಮಿತಿ ಪದಾಧಿಕಾರಿಗಳಾದ ಬಿ. ವಸಂತ ಪೈ ಬದಿಯಡ್ಕ, ಶ್ರೀಧರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್, ಡಿವೈಎಸ್ಪಿ ಶಿಲ್ಪಾ ಡಿ, ಸಹಾಯಕ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.
ಶ್ರೀಲಂಕಾ ಪ್ರಧಾನಿಗೆ ಬೀಳ್ಕೊಡುಗೆ:
ಕಾಸರಗೋಡಿಗೆ ಪ್ರಥಮ ಬಾರಿಗೆ ಖಾಸಗಿ ಭೇಟಿಗಾಗಿ ಆಗಮಿಸಿ ಕ್ಷೇತ್ರ ದರ್ಶನದ ಬಳಿಕ ಹಿಂತಿರುಗಿದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಅವರನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ನೇತೃತ್ವದಲ್ಲಿ ಬೇಕಲ್ ಲಲಿತ್ ರೆಸಾರ್ಟ್ ಹೆಲಿಪ್ಯಾಡ್ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಅವರೊಂದಿಗೆ ಚೆನ್ನೈಯ ಶ್ರೀಲಂಕಾ ಡೆಪ್ಯೂಟಿ ಹೈಕಮೀಷನರ್ ವಿಶ್ವನಾಥ್ ಅಪೋನ್ಸು, ಕಾಸರಗೋಡು ಎಸ್ಪಿ ಜೇಮ್ಸ್ ಥೋಮಸ್ ಮತ್ತಿತರರು ಜೊತೆಗಿದ್ದರು.