ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಹೆಚ್ಚಳ ಕಂಡು ಬರುತ್ತಿರುವ ನಡುವೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಹೆಚ್ಚಾಗಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಮೂರನೇ ಕೋವಿಡ್ ಅಲೆಯ ಸಂದರ್ಭದಲ್ಲಿ ವೈದ್ಯರುಗಳಲ್ಲಿ ಹೆಚ್ಚಾಗಿ ಕೋವಿಡ್ ಪ್ರಕರಣ ಹರಡುವ ಆತಂಕವನ್ನು ಉಂಟು ಮಾಡಿದೆ. ಕಳೆದ ಕೆಲವು ದಿನಗಳಿಂದ ದೆಹಲಿ ಮತ್ತು ಬಿಹಾರದಿಂದ ತಲಾ 150 ವೈದ್ಯಕೀಯ ವೃತ್ತಿಪರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಸುಮಾರು 300 ಮತ್ತು ಬೆಂಗಳೂರಿನಿಂದ ಅನಿರ್ದಿಷ್ಟ ಸಂಖ್ಯೆಯಲ್ಲಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.
ಮುಂಬೈನಲ್ಲಿ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯ 157 ವೈದ್ಯರಿಗೆ ಕೋವಿಡ್ ಸೋಂಕು ತಗುಲಿದೆ. ಸಿಯಾನ್ ಆಸ್ಪತ್ರೆಯಲ್ಲಿ ಇನ್ನೂ 80 ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಗರದ ಇತರ ಪ್ರದೇಶದಲ್ಲಿ ಹಲವಾರು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರದಾದ್ಯಂತ ಇದುವರೆಗೆ 260 ಕ್ಕೂ ಹೆಚ್ಚು ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ವೈದ್ಯರ ಸಂಘ ತಿಳಿಸಿದೆ.ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ರೋಗಿಗಳಿಗೆ ಚಿಕಿತ್ಸೆ ನೀಡಲು ಅರ್ಹ ವೈದ್ಯಕೀಯ ವೃತ್ತಿಪರರ ಕೊರತೆ ಕಂಡು ಬರುವ ಸಾಧ್ಯತೆ ಹಿನ್ನೆಲೆಯಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಚಿಕಿತ್ಸೆ ನೀಡಲು ಮುಂದಾಗಬೇಕಾದ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಈ ಘಟನೆಯು ನಮಗೆ ಎರಡನೇ ಕೋವಿಡ್ ಅಲೆಯನ್ನು ನೆನಪಿಸಬಹುದು ಎಂದು ಕೂಡಾ ತಜ್ಞರು ಹೇಳುತ್ತಾರೆ.
ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಹೆಚ್ಚಳ ಆಸ್ಪತ್ರೆಗೆ ದಾಖಲಾತಿ ಹೆಚ್ಚಳವಾಗುತ್ತಿರುವ ಬಗ್ಗೆ ಎನ್ಡಿಟಿವಿಗೆ ಮಾಹಿತಿ ನೀಡಿದ ರಾಷ್ಟ್ರ ರಾಜಧಾನಿಯ ಎಲ್ಎನ್ಜೆಪಿ ಆಸ್ಪತ್ರೆಯ ನಿರ್ದೇಶಕ, "ಹೆಚ್ಚು ಪ್ರಕರಣಗಳು ದಾಖಲಾದಂತೆ ಹೆಚ್ಚಿನ ಜನರು ಆಸ್ಪತ್ರೆಗೆ ದಾಖಲು ಆಗುತ್ತಾರೆ. ನಗರದಲ್ಲಿ ಕೋವಿಡ್ ಪ್ರಕರಣಗಳು ಕೂಡಾ ತೀವ್ರವಾಗಿ ಏರಿಕೆ ಕಾಣುತ್ತಿದೆ. ಎರಡನೇ ಕೋವಿಡ್ ಅಲೆಗಿಂತ ವೇಗವಾಗಿ ಈಗ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಮೊದಲು ದಿನಕ್ಕೆ ಎರಡರಿಂದ ಮೂರು ಮಂದಿ ಆಸ್ಪತ್ರೆಗೆ ದಾಖಲು ಆಗುತ್ತಿದ್ದರು. ಆದರೆ ಈಗ ಪ್ರತಿದಿನ ಸುಮಾರು 20 ಮಂದಿ ಆಸ್ಪತ್ರೆಗೆ ದಾಖಲು ಆಗುತ್ತಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ. ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಸೆಹರ್ ಖುರೇಷಿ, "ಕೋವಿಡ್ ಸೋಂಕಿತರನ್ನು ದಾಖಲು ಮಾಡಲು ಸಂಪೂರ್ಣ ಮಹಡಿಯನ್ನು ಮೀಸಲಿಡಲಾಗಿದೆ. ದೈನಂದಿನ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಿದೆ. ಮೂರರಿಂದ 10 ಕ್ಕೆ ಏರಿದೆ," ಎಂದು ತಿಳಿಸಿದ್ದಾರೆ. ಈ ಆಸ್ಪತ್ರೆಯ 20 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಕಂಡು ಬಂದಿದೆ.
ಮುಂಬೈನಲ್ಲಿ ಪರಿಸ್ಥಿತಿ ಭೀಕರ ಮುಂಬೈನಲ್ಲಿ ಪರಿಸ್ಥಿತಿಯು ಭೀಕರವಾಗಿದೆ, ಆದರೆ ವೈದ್ಯರು ಹೆಚ್ಚು ಸಮಯ ಕೋವಿಡ್ ರೋಗಿಗಳಾಗಿ ಆಸ್ಪತ್ರೆಯಲ್ಲಿ ದಾಖಲಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ಸೇಂಟ್ ಜಾರ್ಜ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಆಕಾಶ್ ಖೋಬ್ರಗಡೆ, "ಯಾರು ಆಸ್ಪತ್ರೆಗೆ ದಾಖಲು ಆಗುತ್ತಾರೋ ಅವರು ಮೂರರಿಂದ ಐದು ದಿನಗಳಲ್ಲಿ ಸುಧಾರಿಸುತ್ತಿದ್ದಾರೆ. ನೆಗೆಟಿವ್ ಕಂಡು ಬಂದ ಬಳಿಕ ನಾವು ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತಿದ್ದೇವೆ. ಇಲ್ಲಿನ ವೈದ್ಯರು ನಮ್ಮ ಬೆನ್ನೆಲುಬು. ಆದರೆ 42 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಆದರೆ ಮೊದಲು ಕೋವಿಡ್ ತಗುಲಿ ಆಸ್ಪತ್ರೆಗೆ ದಾಖಲು ಆಗಿದ್ದವರು ಈಗ ಕೋವಿಡ್ನಿಂದ ಗುಣಮುಖರಾಗಿ ಚಿಕಿತ್ಸೆ ನೀಡಲು ಆರಂಭ ಮಾಡುವಷ್ಟು ಸದೃಢರಾಗಿದ್ದಾರೆ," ಎಂದು ತಿಳಿಸಿದ್ದಾರೆ. ಡಿಸೆಂಬರ್ 30 ರಂದು ಅದೇ ಆಸ್ಪತ್ರೆಯ ಮುಖ್ಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ ಭೂಷಣ್ ವಾಂಖೆಡೆಗೆ ಕೋವಿಡ್ ತಗುಲಿದೆ. ಮಂಗಳವಾರ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಈಗ ಕರ್ತವ್ಯವನ್ನು ಮತ್ತೆ ಆರಂಭ ಮಾಡಿದ್ದಾರೆ.
ವೈದ್ಯರ ಕೆಲಸ ಮೂರು ಪಟ್ಟು ಅಧಿಕ ಭಾರತೀಯ ವೈದ್ಯಕೀಯ ಸಂಘವು ಕಳೆದ ತಿಂಗಳ ಆರಂಭದಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಲಸಿಕೆ ಪ್ರಮಾಣವನ್ನು ಘೋಷಿಸಲು ಕೇಂದ್ರವನ್ನು ಒತ್ತಾಯಿಸಿ ಹೋರಾಟ ನಡೆಸಿದೆ. ಆದರೆ ಈಗ ಕೋವಿಡ್ ಸೋಂಕು ಮಾತ್ರವಲ್ಲದೇ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ NEET ಗಾಗಿ ಆಯ್ಕೆ ಮಾನದಂಡಗಳ ಮೇಲೆ ಕೇಂದ್ರದ ನಿಲುವಿನ ವಿರುದ್ಧದ ಪ್ರತಿಭಟನೆಯು ಕೂಡಾ ವೈದ್ಯಕೀಯ ಸಿಬ್ಬಂದಿಗಳ ಕೊರತೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ದೆಹಲಿಯ ಆಸ್ಪತ್ರೆಯ ಸಿಬ್ಬಂದಿ, "ನಮ್ಮ ಕೆಲಸವು ಮೂರು ಪಟ್ಟು ಹೆಚ್ಚಾಗಿದೆ. ನಮಗೆ ಈಗಾಗಲೇ ಹೊರೆಯಾಗಿದೆ. NEET-PG ಸಮಸ್ಯೆಗಳಿಂದಾಗಿ ಪ್ರತಿಭಟಿಸುತ್ತಿರುವ ಇಡೀ ಬ್ಯಾಚ್ ವೈದ್ಯರು ಇನ್ನೂ ಬಂದಿಲ್ಲ. ನಾವು ಪಿಪಿಇ ಕಿಟ್ಗಳನ್ನು ಧರಿಸಿ ದೀರ್ಘ ಕಾಲ ನಿಲ್ಲಬೇಕಾಗುತ್ತಿದೆ," ಎಂದು ತಿಳಿಸಿದ್ದಾರೆ.